ಆರೋಗ್ಯವೇ ಭಾಗ್ಯ, ಅದಕ್ಕಾಗೇ ಹೊಸ ನೀತಿ ಶೀಘ್ರ: ಕೃಷ್ಣ
ಬೆಂಗಳೂರು : ಕರ್ನಾಟಕವು ಶೀಘ್ರದಲ್ಲಿಯೇ ಹೊಸ ಆರೋಗ್ಯ ನೀತಿಯಾಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು ಇಲ್ಲಿ ತಿಳಿಸಿದರು.
ಜಯದೇವ ಹೃದ್ರೋಗ ಸಂಸ್ಥೆಯ ಹೊಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ನಾಡಿನ ಎಲ್ಲಾ ಜನರ ಹಿತಾಸಕ್ತಿಯ ಆಶೋತ್ತರವಾಗಲಿರುವ ಈ ಹೊಸ ನೀತಿಯ ಜಾರಿ ನಿರ್ಣಾಯಕ ಹಂತದಲ್ಲಿದೆ ಎಂದರು.
ಔಷಧ ಕಂಪನಿಗಳು ಬಡ ಬಗ್ಗರ ಅನುಕೂಲಕ್ಕೆ ಔಷಧಗಳ ಬೆಲೆಯನ್ನು ತಗ್ಗಿಸಬೇಕೆಂದು ಕೇಳಿಕೊಂಡ ಕೃಷ್ಣ , ಇಂತಹ ಕಂಪನಿಗಳ ಜತೆಗೆ ಸರ್ಕಾರೇತರ ಸಂಸ್ಥೆಗಳೂ ಕೈ ಜೋಡಿಸಿ ಮುಖ್ಯಮಂತ್ರಿಗಳ ಆರೋಗ್ಯ ನಿಧಿಗೆ ಯಥೇಚ್ಛವಾಗಿ ಧನ ಸಹಾಯ ಮಾಡಬೇಕೆಂದು ಕೇಳಿಕೊಂಡರು.
ಇತ್ತೀಚೆಗಷ್ಟೇ ನಾರಾಯಣ ಹೃದಯಾಲಯದಲ್ಲಿ ಪ್ರಾರಂಭಿಸಲಾಗಿರುವ ಟೆಲೆಮೆಡಿಸಿನ್ ಪದ್ಧತಿಯನ್ನು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಯೂ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಜಯದೇವ ಹೃದ್ರೋಗ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಸರ್ಕಾರಿ ಆಸ್ಪತ್ರೆಗಳ ಬಗೆಗೆ ಜನರಲ್ಲಿ ಇರುವ ತಾತ್ಸಾರದ ಧೋರಣೆಯನ್ನು ಹೋಗಲಾಡಿಸುವ ಬಗ್ಗೆ ಆಶಾಭಾವನೆ ವ್ಯಕ್ತ ಪಡಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...