ನಿಧಿಯ ಕೊರೆಯ ನಡುವೆಯೂ ಬಿಟಿಯಲ್ಲಿ ಕರ್ನಾಟಕ ಮುಂದು : ಕಿರಣ್
ಬೆಂಗಳೂರು: ರಾಜ್ಯದಲ್ಲಿ ಜೈವಿಕ ತಂತ್ರಜ್ಞಾನದ ಅಭಿವೃದ್ಧಿಗೆ ಸಾಕಷ್ಟು ಸಾಹಸೀ ಬಂಡವಾಳ ನಿಧಿ (ವೆಂಚರ್ ಕ್ಯಾಪಿಟಲ್ ಫಂಡ್)ಯ ಅಭಾವವಿದೆ ಎಂದು ಜೈವಿಕ ತಂತ್ರಜ್ಞಾನದ ರಾಜ್ಯ ವಿಷನ್ ಗ್ರೂಪ್ ಅಧ್ಯಕ್ಷ ಕಿರಣ್ ಮುಜುಂದಾರ್ ಹೇಳಿದ್ದಾರೆ.
ಎರಡನೆಯ ಜೈವಿಕ ತಂತ್ರಜ್ಞಾನ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಮಾತನಾಡುತ್ತಿದ್ದ ಕಿರಣ್ ಪ್ರಸ್ತುತ ಕರ್ನಾಟಕವು ಅತಿ ಹೆಚ್ಚು ವೆಂಚರ್ಕ್ಯಾಪಿಟಲ್ನ್ನು ಬರಮಾಡಿಕೊಳ್ಳುತ್ತಿರುವ ದೊಡ್ಡ ರಾಜ್ಯವೆನಿಸಿದೆ. ಸುಮಾರು 70 ಕೋಟಿ ರೂಪಾಯಿ ಹಣ ರಾಜ್ಯಕ್ಕೆ ಹರಿದು ಬರುತ್ತಿದೆಯಾದರೂ, ಜೈವಿಕ ತಂತ್ರಜ್ಞಾನದ ಅಭಿವೃದ್ಧಿಗೆ ಶತಕಗಳ ಲೆಕ್ಕದಲ್ಲಿ ಹಣ ಹೂಡಬೇಕಾಗಿದೆ ಎಂದರು.
ಬಯೋಟೆಕ್ ಕಂಪೆನಿಗಳನ್ನು ಸ್ಥಾಪಿಸಲು ಮೂಲ ಬಂಡವಾಳ ಅತ್ಯಗತ್ಯ. ಜೈವಿಕ ತಂತ್ರಜ್ಞಾನ ಕ್ಷೇತ್ರವನ್ನು ಅತ್ಯಂತ ಅಪಾಯಕಾರಿ ಉದ್ಯಮವೆಂದು ಪರಿಗಣಿಸಿ, ವೆಂಚರ್ ಕ್ಯಾಪಿಟಲಿಸ್ಟ್ ಗಳು ಬಂಡವಾಳ ಹೂಡಲು ಹಿಂದು ಮುಂದು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜೈವಿಕ ತಂತ್ರಜ್ಞಾನಕ್ಕೆ ಭವಿಷ್ಯವಿಲ್ಲ ಎಂಬ ಭ್ರಮೆಯಿದೆ. ಉದ್ಯಮಿಗಳು ಈ ಭ್ರಮೆಯಿಂದ ಹೊರಬರುವಂತೆ ಮಾಡಲು ವಿಜ್ಞಾನಿಗಳು ಜೈವಿಕ ತಂತ್ರಜ್ಞಾನದ ಹೊಸ ಆಯಾಮಗಳ ಬಗ್ಗೆ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.
ನಾವೇ ಮುಂದು, ಆದರೂ..
ಈ ಎಲ್ಲ ಅಂಶಗಳ ಹೊರತಾಗಿಯೂ ಜೈವಿಕ ತಂತ್ರಜ್ಞಾನದಲ್ಲಿ ರಾಜ್ಯ ಉತ್ತಮ ಸಾಧನೆಯನ್ನು ತೋರಿಸುತ್ತಿದೆ. ದೇಶದ ಇತರ ರಾಜ್ಯಗಳಿಗಿಂತ ಮುಂದಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ನಡೆದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 72 ಬಯೋಟೆಕ್ ಕಂಪೆನಿಗಳು, 3.5 ಸಾವಿರ ವಿಜ್ಞಾನಿಗಳೂ ಸೇರಿದಂತೆ 5 ಸಾವಿರ ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿದೆ.
ಔರಿಜಿನ್ ಬಯೋಕಾನ್, ಶಾಂತಾ ಬಯೋಟೆಕ್, ಸಿಡಿಸಿ ಲಿನಕ್ಸ್, ಕ್ಲಿನಿಜಿನ್, ಕ್ಲಿಂಟೆಕ್, ಮೆಟಾಹೆಲಿಕ್ಸ್, ಮೊಲಿಕ್ಯುಲರ್ ಕನೆಕ್ಷನ್ಸ್, ಲೋಟಸ್ ಲ್ಯಾಬ್ಸ್, ಗಂಗಾಟೆನ್ ಟೆಕ್ನಾಲಜೀಸ್ ನಂತಹ ಕಂಪೆನಿಗಳು ಕಳೆದ ವರ್ಷವಷ್ಟೇ ಆರಂಭವಾಗಿದ್ದು, ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ.
ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಇಂತಹ ಸಮೀಕ್ಷೆ ನಡೆಸಿ ಜೈವಿಕ ತಂತ್ರಜ್ಞಾನದಲ್ಲಿ ರಾಜ್ಯದ ಸಾಮರ್ಥ್ಯವನ್ನು ಪ್ರಸ್ತುತಪಡಿಸಿದೆ. ಈ ಕಂಪೆನಿಗಳು 700 ಕೋಟಿಗೂ ಹೆಚ್ಚು ನಿವ್ವಳ ಆದಾಯವನ್ನು ತೋರಿಸಿದ್ದು, 250 ಕೋಟಿ ರೂಪಾಯಿಗಳ ರಫ್ತು ವ್ಯವಹಾರವನ್ನೂ ನಿಭಾಯಿಸುತ್ತಿವೆ ಎಂದು ಕಿರಣ್ ವಿವರಿಸಿದರು.
ಬಿಟಿ ತಳಿ ಹತ್ತಿ ಯನ್ನು ಬಳಸಿ
ಮೇಳವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಿಟಿ ಹತ್ತಿ ತಳಿಯನ್ನು ಬಳಸಲು ರಾಜ್ಯದ ರೈತರು ಹಿಂಜರಿಯ ಬಾರದು ಎಂದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ರೈತರು ಸ್ಪರ್ಧಿಸಲು ಬಿಟಿ ಹತ್ತಿ ತಳಿಯನ್ನು ಬಳಸಿ ಹೆಚ್ಚು ಇಳುವರಿ ಪಡೆಯುವುದು ಉತ್ತಮ.
ಚೀನಾದವರು ಈಗಾಗಲೇ ಬಿಟಿ ಹತ್ತಿಯನ್ನು ಬೆಳೆಯುತ್ತಿದ್ದಾರೆ. ನಾವು ಈ ಅವಕಾಶವನ್ನು ಕೈಬಿಟ್ಟರೆ, ಹತ್ತಿ ಮಾರುಕಟ್ಟೆಯಲ್ಲಿ ಚೀನಾ ನಮ್ಮನ್ನು ಹಿಂದೆ ಹಾಕುವುದು ಖಂಡಿತ ಎಂದ ಮುಖ್ಯಮಂತ್ರಿ ಕೃಷ್ಣ ಸಿನಿಕರ ಮಾತಿಗೆ ಕಿವಿಕೊಟ್ಟು ಅಭಿವದ್ಧಿಯ ಪಥವನ್ನು ಕೈಬಿಡುವುದು ಸರಿಯಲ್ಲ ಎಂದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ