ಪ್ಲಾಸ್ಟಿಕ್ ನಿಷೇಧ ಕಷ್ಟ ಕಷ್ಟ : ಅಸಹಾಯಕತೆ ತೋಡಿಕೊಂಡ ಕೃಷ್ಣ
ಬೆಂಗಳೂರು: ಪ್ಲಾಸ್ಟಿಕ್ನಿಂದ ಪರಿಸರಕ್ಕೆ ಹಾನಿಯಾಗುವುದು ಹೌದು. ಪರಿಸರವಾದಿಗಳೆಲ್ಲ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಅಂತ ಆಗ್ರಹಿಸುತ್ತಲೇ ಇದ್ದಾರೆ. ಆದರೇನು ಮಾಡುವುದು ಹೇಳಿ...ಜೀವನದ ಎಲ್ಲ ಮಗ್ಗುಲಲ್ಲಿಯೂ ತೂರಿಕೊಂಡಿರುವ ಈ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು ಕಷ್ಟವಾಗುತ್ತದೆ... ಹೀಗೆಂದು ಅಸಹಾಯಕತೆ ತೋಡಿಕೊಂಡವರು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ.
ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳನ್ನು ಡಾಂಬರಿಗೆ ಮಿಶ್ರ ಮಾಡುವ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಕೃಷ್ಣ ಪ್ಲಾಸ್ಟಿಕ್ ನಿಷೇಧ ಕುರಿತಂತೆ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಪ್ಲಾಸ್ಟಿಕ್ ನಿಷೇಧಿಸಬಹುದು. ಆದರೆ ಬದಲಿ ವ್ಯವಸ್ಥೆಯಾಗಿರುವ ಪರಿಸರ ಸ್ನೇಹಿ ವಸ್ತುಗಳು ದುಬಾರಿಯಾಗಿವೆ. ಇದರಿಂದ ಪ್ಲಾಸ್ಟಿಕ್ ನಿಷೇಧಿಸಿ ಎಂದು ಘೋಷಿಸುವುದು ಕಷ್ಟವಾಗುತ್ತದೆ ಎಂದು ಕೃಷ್ಣ ಹೇಳಿದರು.
ಒಂದು ಕಾಲದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವಸ್ತುವಾಗಿತ್ತು. ಈಗ ಪ್ಲಾಸ್ಟಿಕ್ಗಿರುವ ಬೇಡಿಕೆಗೆ ಅಂತಸ್ತಿನ ವ್ಯತ್ಯಾಸ ಇಲ್ಲ. ಹಾಗೆ ರಾಯಚೂರು ಥರ್ಮಲ್ ವಿದ್ಯುತ್ ಸ್ಥಾವರದಲ್ಲಿ ಸೃಷ್ಟಿಯಾಗುತ್ತಿರುವ ಬೂದಿ ಕೂಡ. ಹಾರುಬೂದಿಯ ವಿಲೇವಾರಿಗೇ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿತ್ತು. ಆದರೆ ಇತ್ತೀಚೆಗೆ ಈ ಹಾರುಬೂದಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ ನೋಡಿ ಎಂದು ಕೃಷ್ಣ ಹೇಳಿದರು. ಆದರೆ ಈ ಹಾರುಬೂದಿಯನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ಏನನ್ನೂ ಹೇಳಲಿಲ್ಲ.
ತ್ಯಾಜ್ಯಪ್ಲಾಸ್ಟಿಕ್ನ್ನು ಡಾಂಬರಿಗೆ ಸೇರಿಸುವ ಯೋಜನೆಯನ್ನು ಕೃಷ್ಣ ಶ್ಲಾಘಿಸಿದರು. ರಾಜ್ಯಾದ್ಯಂತ ರಸ್ತೆಯ ಡಾಂಬರೀಕರಣದ ಸಂದರ್ಭದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ನ್ನು ಬಳಸುವುದು ಉತ್ತಮ ಯೋಜನೆ. ನಾವು ಯಾವತ್ತೂ ತ್ಯಾಜ್ಯ ವಸ್ತುಗಳೆಂದು ಹೀಗಳೆಯಬಾರದು. ಎಲ್ಲವೂ ಒಂದಲ್ಲ ಒಂದು ದಿನ, ಅನಕೂಲಕ್ಕೆ ಬಂದೇ ಬರುತ್ತದೆ ಎಂಬುದನ್ನು ಪ್ಲಾಸ್ಟಿಕ್ ಸಾಬೀತುಪಡಿಸುತ್ತಿದೆ ಎಂದು ಬುದ್ಧಿ ಮಾತು ಹೇಳಿದ ಕೃಷ್ಣ ತಮ್ಮ ಭಾಷಣ ಮುಗಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ