ದಳವಿಲೀನ ಕ್ರಿಯೆಗೆ ಹಸಿರು ನಿಶಾನೆ, ಹೊಸಪಕ್ಷ:ಅಖಿಲ ಭಾರತ ಜನತಾದಳ
ಬೆಂಗಳೂರು: ಜನತಾದಳದ ಎರಡೂ ಬಣಗಳು ವಿಲೀನ ಪ್ರಕ್ರಿಯೆಗೆ ಒಪ್ಪಿದ್ದು, ರಾಷ್ಟ್ರಮಟ್ಟದಲ್ಲಿ ಅಖಿಲ ಭಾರತ ಜನತಾದಳ ಎಂಬ ಹೊಸ ಪಕ್ಷವನ್ನು ಆರಂಭಿಸಲು ನಿರ್ಧರಿಸಿವೆ.
ಸಂಯುಕ್ತಾ ಜನತಾದಳದ ರಾಜ್ಯ ಅಧ್ಯಕ್ಷ ಸಿ. ಬೈರೇಗೌಡ ಅವರ ನಿವಾಸದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎರಡೂ ಬಣಗಳ ಮುಖಂಡರು ಚರ್ಚಿಸಿ ವಿಲೀನ ಪ್ರಕ್ರಿಯೆಗೆ ಒಪ್ಪಿದ್ದಾರೆ. ನಂತರದ ಸುದ್ದಿಗೋಷ್ಠಿಯಲ್ಲಿ ಭೈರೇಗೌಡ ಹಾಗೂ ಜನತಾದಳ ಎಸ್.ನ ಸಿದ್ಧರಾಮಯ್ಯ ಅವರು ಸಭೆಯ ವಿವರಗಳನ್ನು ತಿಳಿಸಿದರು.
ಮೇ 14ರೊಳಗೆ ವಿಲೀನ ಪ್ರಕ್ರಿಯೆ ಮುಕ್ತಾಯವಾಗಲಿದೆ. ಹೊಸದಾಗಿ ಸ್ಥಾಪನೆಯಾಗಲಿರುವ ಅಖಿಲ ಭಾರತ ಜನತಾದಳ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿಗಳ ಹುಡುಕಾಟವನ್ನು ಮುಖಂಡರು ಆರಂಭಿಸಿದ್ದಾರೆ.
ಏಪ್ರಿಲ್ 11ರಂದು ಮತ್ತೊಮ್ಮೆ ಎರಡೂ ಬಣಗಳ ಜಂಟಿ ಅಧಿವೇಶನ ನಡೆಯಲಿದ್ದು ವಿಲೀನ ಪ್ರಕ್ರಿಯೆಗೆ ಅಂತಿಮ ಸ್ವರೂಪ ಸಿಗಲಿದೆ. ಹೊಸ ಪಕ್ಷದ ಧ್ವಜ, ಚಿಹ್ನೆ, ಸಂವಿಧಾನ ರೂಪಿಸಲು ಪ್ರತ್ಯೇಕ ಸಮಿತಿಯನ್ನು ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಅಲ್ಲದೆ ಸಂಯುಕ್ತ ಜನತಾ ದಳ ಈಗಾಗಲೇ ಎನ್ಡಿಎ ಮೈತ್ರಿ ಕೂಟದಿಂದ ಹೊರಬರಲು ರಾಜ್ಯಮಟ್ಟದಲ್ಲಿ ನಿರ್ಧರಿಸಿದೆ. ಆದರೆ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಅವರು ಮೈತ್ರಿಕೂಟದಿಂದ ಹೊರಬರಲು ಹಿಂಜರಿಯುತ್ತಿರುವುದರಿಂದ ಅವರನ್ನು ಬದಿಗೊತ್ತಿ ವಿಲೀನ ಪ್ರಕ್ರಿಯೆಗೆ ಮುಂದಾಗಲೂ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಭೈರೇಗೌಡರು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...