ರಾಜ್ಯದಲ್ಲಿ ಮೂಲಭೂತ ಸೌಕರ್ಯ ವಂಚನೆ, ವಿದೇಶಿ ಪ್ರವಾಸಿಗರ ಸುಲಿಗೆ?
ಬೆಂಗಳೂರು : ವಿದೇಶೀ ಪ್ರವಾಸಿಗರನ್ನು ಕರ್ನಾಟಕದಲ್ಲಿ ಸುಲಿಯಲಾಗುತ್ತಿದೆ ಎಂಬ ಆಪಾದನೆಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಎದುರಿಸುತ್ತಿದೆ.
ಇಲ್ಲಿರುವ ಪ್ರವಾಸೀ ತಾಣಗಳು, ಸ್ಮಾರಕಗಳನ್ನು ಸಂದರ್ಶಿಸಲು ಪ್ರವೇಶ ಶುಲ್ಕದಲ್ಲಿ ದೇಶೀ ಪ್ರವಾಸಿಗರಿಗಿಂತ ಶೇ.50 ಅಥವಾ ನೂರು ಪಟ್ಟು ಹೆಚ್ಚಾಗಿರುತ್ತದೆ. ಏರ್ಲೈನ್ಸ್ನಲ್ಲಿಯೂ ಅಷ್ಟೆ. ವಿದೇಶಿಯರಿಗೆ ಶೇ. 30ರಿಂದ ಶೇ. 35ರವರೆಗೆ ಸರ್ಚಾರ್ಜ್ ವಿಧಿಸಲಾಗುತ್ತದೆ. ಆದರೆ ಭಾರತೀಯರಿಗೆ ಸಂಪೂರ್ಣ ವಿನಾಯಿತಿ.
ಸ್ಮಾರಕಗಳನ್ನು ಸಂದರ್ಶಿಸಲು ವಿದೇಶಿಯರು 10 ಡಾಲರ್ಗಳಷ್ಟು ಹೆಚ್ಚುವರಿ ಹಣವನ್ನು ನೀಡಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ ಎಂದು ಜರ್ಮನಿಯ ಅತಿ ದೊಡ್ಡ ಶೈಕ್ಷಣಿಕ ಪ್ರವಾಸೀ ನಿರ್ವಾಹಕ ಡಬ್ಲ್ಯೂ. ಕೋಲ್ನ್ಸ್ ಪರ್ಗರ್ ಹೇಳುತ್ತಾರೆ. ಅದೂ ಅಲ್ಲದೆ ಆ ಸ್ಮಾರಕಗಳ ಬಳಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಶೌಚಾಲಯದ ವ್ಯವಸ್ಥೆಯೂ ಇಲ್ಲದೇ ಇರುವಾಗ ಅಷ್ಟೊಂದು ಹಣ ಯಾಕೆ ಕೊಡಬೇಕು ? ಎನ್ನುವುದು ಕೋಲ್ನ್ಸ್ಪರ್ಗರ್ ಪ್ರಶ್ನೆ.
ಬೇರೆ ಯಾವ ದೇಶದಲ್ಲಿಯೂ ಈ ರೀತಿ ದೇಶಿ ಹಾಗೂ ವಿದೇಶಿ ಪ್ರವಾಸಿಗರ ನಡುವೆ ಭೇದಬಾವ ಇರುವುದಿಲ್ಲ. ಈಜಿಪ್ಟ್ನಲ್ಲಿ ಕೆಲವು ಪ್ರವಾಸೀ ತಾಣಗಳಲ್ಲಿ ವಿದೇಶೀ ಪ್ರವಾಸಿಗರಿಂದ ಹೆಚ್ಚು ಶುಲ್ಕ ವಸೂಲಿ ಮಾಡುತ್ತಾರೆ. ಆದರೆ ಆ ಹೆಚ್ಚುವರಿ ಹಣ ಯಾವ ರೀತಿ ಬಳಕೆಯಾಗಿದೆ ಎಂಬ ಬಗ್ಗೆ ರಸೀತಿಯೂ ಇರುತ್ತದೆ.
ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಸೋಮನಾಥಪುರ, ಬೇಲೂರು, ಹಳೇಬೀಡು.. ಹೀಗೆ ಸಾಲು ಸಾಲು ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಕರ್ನಾಟಕದಲ್ಲಿ ಹೀಗೆ ವಿದೇಶಿಯರನ್ನು ಶೋಷಣೆಗೆ ಗುರಿ ಮಾಡುವುದು ಸಲ್ಲ . ಅಲ್ಲದೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳೂ ವಿದೇಶಿ ಪ್ರವಾಸಿಗರಿಗೆ ಒಂದು ದೊಡ್ಡ ಸಮಸ್ಯೆ. ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಸರಕಾರ ಇದನ್ನೆಲ್ಲ ಗಮನಿಸಬೇಕು ಎಂದು ಕೋಲ್ನ್ಸ್ಪರ್ಗರ್ ಸಂದರ್ಶನವೊಂದರಲ್ಲಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಅಭಿಪ್ರಾಯವೇನು?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...