ಮಂದಿರಕ್ಕಾಗಿ ಆತ್ಮಾಹುತಿ, ಇಂಥವರ ನಿರ್ಲಕ್ಷಿಸದಿದ್ದರೆ ದೇಶದ ನೆಮ್ಮದಿಯೇ ಆಹುತಿ!
: ತಮ್ಮ ಜನಾಂಗದ ಅಭಿವೃದ್ಧಿಗೆ, ಇನ್ನೇನೋ ಸ್ವಜನ ಕಾರ್ಯಕ್ಕಾಗಿ ಸರಕಾರವನ್ನು ದಬಾಯಿಸುವವರು ಆತ್ಮಾಹುತಿ ಎಂಬ ಹೊಸ ನಮೂನೆಯ ಬೆದರಿಕೆಯನ್ನು ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಸರಕಾರದ ಉಭಯ ಸಂಕಟ ಮತ್ತು ಸಾರ್ವಜನಿಕರ ಒಳಿತಿನ ಬಗ್ಗೆ ಯೋಚಿಸುತ್ತಾರೆಯೇ...? ಅಯೋಧ್ಯೆಯ ವಿಷಯವೂ ಇದಕ್ಕೆ ಹೊರತಲ್ಲ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗದೇ ಇದ್ದಲ್ಲಿ ಆತ್ಮಾಹುತಿ ಮಾಡಿಕೊಳ್ಳುತ್ತೇವೆ ಎಂದು ಕಿರುಚಿಕೊಳ್ಳುವವರನ್ನು ಸರ್ಕಾರ ನಿರ್ಲಕ್ಷಿಸಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಅಭಿಪ್ರಾಯಪಟ್ಟಿದ್ದಾರೆ.
ದೇವಸ್ಥಾನ ಕಟ್ಟದೇ ಇದ್ದರೆ ಆತ್ಮಾಹುತಿ ಮಾಡುವುದಾಗಿ ಸರಕಾರವನ್ನು ಬೆದರಿಸುವ ಅತಿ ಸೂಕ್ಷ್ಮ ವಿಧಾನಗಳನ್ನು ಬಳಸುವವರನ್ನು ಖಂಡಿಸಬೇಕು. ಅಂತಹ ಪ್ರಯತ್ನಗಳಿಗೆ ನಿರ್ಲಕ್ಷ್ಯವೇ ಸೂಕ್ತ ಮದ್ದು ಎಂದು ಮರುಘರಾಜೇಂದ್ರ ಶರಣರು ಹೇಳಿದ್ದಾರೆ. ಅವರು ಶಿವಯೋಗಾಶ್ರಮದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈಗೀಗ ಜನರು ಬಡಜನರ ಉದ್ಧಾರದ ಗೊಡವೆಗೆ ಹೋಗುವುದರ ಬದಲು ಬುದ್ಧಿಜೀವಿಗಳಂತೆ ಮಾತನಾಡುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ದೇಶದಿಂದ ಹಿಂಸೆಯನ್ನು ತೊಡೆದು ಹಾಕದೇ ಇದ್ದರೆ, ಆತ್ಮಾಹುತಿ, ಪ್ರಾಣಾರ್ಪಣೆಯ ಬೆದರಿಕೆಗಳು ಕೇಳಿಬರುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ದೇಶವು ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತದೆ.
ಹಿಂಸೆಯನ್ನು ತೆಕ್ಕೆಗೆ ತೆಗೆದುಕೊಂಡ ಜನರು ಸಾರ್ವಜನಿಕ ಹಿತಾಸಕ್ತಿಯನ್ನು ಮರೆತುಬಿಟ್ಟಿರುತ್ತಾರೆ. ಅನವಶ್ಯಕವಾಗಿ ಹಿಂಸೆಯನ್ನು ಬಿತ್ತುವವರಿಂದ ಜನರ ಮನಸ್ಸಿನಿಂದ ನೆಮ್ಮದಿ ಹಾರಿಹೋಗಿದೆ. ಈ ಎಲ್ಲ ಗೋಳಿನಿಂದ ಮುಕ್ತರಾಗಿ ದೇಶದ ಬಡತನ, ಅನಕ್ಷರತೆಯನ್ನು ನಿವಾರಿಸುವತ್ತ ಸಾರ್ವಜನಿಕ ಕ್ಷೇತ್ರದ ನಾಯಕರು ಗಮನ ಹರಿಸಬೇಕು ಎಂದು ಶರಣರು ಸಲಹೆಮಾಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...