ಹಿಂದೂ- ಮುಸ್ಲಿಂ ಬೆಸುಗೆಗೆ ಕ್ರಿಶ್ಚಿಯನ್ ನಾಯಕರಿಂದ ಸರ್ವ ಧರ್ಮ ಸಭೆ
ಬೆಂಗಳೂರು : ರಾಮಮಂದಿರ ನಿರ್ಮಾಣದ ವಿಷಯವಾಗಿ ಹಿಂದೂಗಳು ಹಾಗೂ ಮುಸ್ಲಿಮರು ಕಚ್ಚಾಡುತ್ತಿರುವ ಹಿನ್ನೆಲೆಯಲ್ಲಿ , ಹದಗೆಡುತ್ತಿರುವ ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ವಧರ್ಮ ಸಭೆಯಾಂದನ್ನು ಕರೆಯಲು ಕ್ರಿಶ್ಚಿಯನ್ ಧಾರ್ಮಿಕ ನಾಯಕರು ನಿರ್ಧರಿಸಿದ್ದಾರೆ.
ಕ್ಯಾಥೊಲಿಕ್ ಹಾಗೂ ಪ್ರೊಟೆಸ್ಟೆಂಟ್ ಪಂಥಗಳ ಕ್ರೆೃಸ್ತ ಧಾರ್ಮಿಕ ನಾಯಕರು ಸರ್ವ ಧರ್ಮ ಸಭೆಯನ್ನು ಕರೆದಿರುವುದಾಗಿ ಸರ್ವಧರ್ಮ ಸಭೆಯ ಸಂಯೋಜಕ ಪಿ.ಎನ್. ಬೆಂಜಮಿನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಭೆಗೆ ಮುಖ್ಯವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಮುಸ್ಲಿಂ ಧಾರ್ಮಿಕ ನಾಯಕರನ್ನು ಆಹ್ವಾನಿಸಲಾಗುವುದು. ಹಿಂದೂ ಹಾಗೂ ಮುಸ್ಲಿಮರ ನಡುವೆ ಏರ್ಪಡುತ್ತಿರುವ ಬಿಕ್ಕಟ್ಟನ್ನು ನಿವಾರಿಸುವ ಯತ್ನವನ್ನು ಈ ಸಭೆಯಲ್ಲಿ ಮಾಡಲಾಗುವುದು ಎಂದು ಬೆಂಜಮಿನ್ ಹೇಳಿದರು.
ಸರ್ವ ಧರ್ಮ ಸಭೆ ನಡೆಯುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹಿಂದೂ ಧರ್ಮ ಹಾಗೂ ಮುಸ್ಲಿಂ ಮತದ ಧಾರ್ಮಿಕ ನಾಯಕರಿಗೆ ಅನುಕೂಲವಾಗುವ ದಿನಾಂಕವನ್ನು ಸದ್ಯದಲ್ಲೇ ನಿಗದಿಪಡಿಸಲಾಗುವುದು. ಮುಸ್ಲಿಮರ ಮನಸ್ಸಿನಲ್ಲಿ ಮೂಡುತ್ತಿರುವ ಪ್ರತ್ಯೇಕತೆಯ ಮನೋಭಾವವನ್ನು ತೊಡೆದು ಹಾಕಲು ಈ ಧಾರ್ಮಿಕ ಸಭೆ ಸಹಕಾರಿಯಾಗಲಿದೆ ಎಂದು ಬೆಂಜಮಿನ್ ಅಭಿಪ್ರಾಯಪಟ್ಟರು.
ಕಳೆದ ಆರು ತಿಂಗಳ ಅವಧಿಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಧಾರ್ಮಿಕ ನಾಯಕರ ನಡುವೆ ನಡೆದ ಮಾತುಕತೆಗಳು, ಚರ್ಚೆಗಳಿಂದಾಗಿ ಎರಡು ಕೋಮುಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಬಹುಮಟ್ಟಿಗೆ ಕಡಿಮೆಯಾಗಿವೆ. ಇದು ಹಿಂದೂ ಮತ್ತು ಮುಸ್ಲಿಂ ಕೋಮಿನವರಿಗೂ ಮಾದರಿಯಾಗಲಿ ಎಂದು ಬೆಂಜಮಿನ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...