ಹೋಳಿ ರಂಗಿನಲ್ಲಿ ಬೆರೆತ ರಕ್ತದ ಹನಿಗಳು ! ಮುನವಳ್ಳಿಯಲ್ಲಿ 3ಸಾವು
ಬೆಳಗಾವಿ: ಮುನವಳ್ಳಿಯಲ್ಲಿ ಶುಕ್ರವಾರ ಸಂಜೆ ಕಾಮನ ಮೆರವಣಿಗೆ ಮತ್ತು ಬಣ್ಣದ ಓಕುಳಿಯಾಟದ ವೇಳೆ ನಡೆದ ಕೋಮು ಗಲಭೆಯಲ್ಲಿ ಮೂವರು ಮೃತರಾಗಿರುವ ದುರಂತ ವರದಿಯಾಗಿದೆ.
ಶರದ್ ಕೃಷ್ಣಾ ಬುಲಬುಲೆ(30) ಮತ್ತು ಶ್ರೀಶೈಲ ಹಡಪದ(25) ಎಂಬವರು ಚೂರಿ ಇರಿತಕ್ಕೆ ಬಲಿಯಾಗಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಗಲಭೆಯಲ್ಲಿ ಗಾಯಗೊಂಡ ಇನ್ನೂ ಅನೇಕರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಮುನವಳ್ಳಿ ಮತ್ತು ಎಂ.ಕೆ. ಹುಬ್ಬಳ್ಳಿ ಪಟ್ಟಣಗಳಲ್ಲಿ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಬೆಳಗಾವಿಯಿಂದ ಹಳ್ಳಿಗೆ ಬಂದಿರುವ ರಾಜ್ಯ ಮೀಸಲು ಪೊಲೀಸ್ ಪಡೆ ಮುನ್ನೆಚ್ಚರಿಕೆ ಕ್ರಮವಾಗಿ ಹಳ್ಳಿಯಲ್ಲಿ ಗಸ್ತು ತಿರುಗುತ್ತಿವೆ.
ಹುಬ್ಬಳ್ಳಿ ನಗರದ ಹೋಳಿ ಹಬ್ಬದಾಟದ ಸದಂರ್ಭದಲ್ಲಿ ಘರ್ಷಣೆ , ಹಲ್ಲೆ, ಚಪ್ಪಲಿ, ಕಲ್ಲುತೂರಾಟದ ಘಟನೆಗಳು ವರದಿಯಾಗಿವೆ. ಹಳೇ ಹುಬ್ಬಳ್ಳಿಯಲ್ಲಿ ಗುರುವಾರದಂದು ವ್ಯಕ್ತಿಯಾಬ್ಬರ ಮೇಲೆ ಹಲ್ಲೆ ಯತ್ನಗಳು ನಡೆದಿವೆ. ಪೊಲೀಸರ ಮಧ್ಯಪ್ರವೇಶದಿಂದ ಅನಾಹುತಗಳು ತಪ್ಪಿವೆ. ಚನ್ನ ಪೇಟೆಯವಲ್ಲಿ ಯುವಕ ತಂಡಗಳೆರಡರ ನಡುವೆ ಘರ್ಷಣೆ ನಡೆದಿದ್ದು ಪರಿಸ್ಥಿತಿ ತುಸು ಬಿಗುವಾಗಿದೆ.
ಬೀಳಗಿ ತಾಲ್ಲೂಕಿನಲ್ಲಿ ಗುಂಪು ಘರ್ಷಣೆ
ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ ಓಕುಳಿಯಾಟದ ಸಂದರ್ಭದಲ್ಲಿ ಎರಡು ಕೋಮಿನವರ ಮಧ್ಯೆ ಮಾತಿನ ಚಕಮಕಿ, ಘರ್ಷಣೆ ನಡೆಯಿತು. ಕಲ್ಲುತೂರಾಟದ ಸಂದರ್ಭದಲ್ಲಿ ಹಲವು ದ್ವಿಚಕ್ರವಾಹನಗಳು ಹಾಗೂ ಕೆಲವು ಬೃಹತ್ ವಾಹನಗಳು ಜಖಂಗೊಂಡಿವೆ. ಘಟನೆಗೆ ಸಂಬಂಧಿಸಿದಂತೆ ಕೆಲವು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮುಧೋಳದಲ್ಲಿಯೂ ಪ್ರಾರ್ಥನಾ ಮಂದಿರದ ಬಳಿ ನಡೆದ ಹೋಳಿ ಆಟದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಘರ್ಷಣೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು ಪರಿಸ್ಥಿತಿ ಹತೋಟಿಯಲ್ಲಿದೆ.
ಬೀದರ್ನಲ್ಲಿಯಾವುದೇ ಅನಾಹುತ ಘಟನೆಗಳು ನಡೆದಿಲ್ಲ. ನಗರದ ಎಲ್ಲ ಬಡಾವಣೆಗಳಲ್ಲಿ ಯುವಕರು ಬಣ್ಣ ಎರಚಿಕೊಂಡು ಹೋಳಿ ಹಾಡು ಹಾಡಿ ಖುಷಿಪಟ್ಟರು. ಕೆಲವು ಕಡೆ ಯುವತಿಯರು ಹಾಗೂ ಮಹಿಳೆಯರೂ ಓಕುಳಿ ಆಟದಲ್ಲಿ ಪಾಲ್ಗೊಂಡು ಸಂಭ್ರಮಕ್ಕೆ ರಂಗೇರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...