‘ಉಚ್ಚಾಟನೆ ಮಾಡೋದು ಅನಂತಕುಮಾರ್, ವೆಂಕಯ್ಯನಾಯ್ಡುಗೆ ಮಕ್ಕಳಾಟ’
ಬೆಂಗಳೂರು : ಇವತ್ತು ಬಿಜೆಪಿ ಪಕ್ಷದಲ್ಲಿ ಒಡಕಾಗಿದ್ದರೆ ಅದು ಸಚಿವ ಅನಂತಕುಮಾರ್ ಮತ್ತು ವೆಂಕಯ್ಯನಾಯ್ಡು ಅವರಿಂದ. ನಾವು ಮದ್ಯೋದ್ಯಮಿ ವಿಜಯ್ ಮಲ್ಯ ಅವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ ಎಂದು ಬಿಜೆಪಿಯ ಉಚ್ಚಾಟಿತ ಶಾಸಕರು ಹೇಳಿದ್ದಾರೆ.
ಗುರುವಾರ ನಡೆದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಎ.ಕೃಷ್ಣಪ್ಪ, ಕೆ.ಎಚ್.ಹನುಮೇಗೌಡ, ಸಿ.ಗುರುಸ್ವಾಮಿ, ವಿ.ಪಾಪಣ್ಣ ಹಾಗೂ ಬಸವರಾಜು, ಅನಂತಕುಮಾರ್ ಮತ್ತು ವೆಂಕಯ್ಯನಾಯ್ಡು ಅವರ ನಿಲುವನ್ನು ಟೀಕಿಸಿದರು. ಬಿಜೆಪಿ ಪಕ್ಷದಿಂದ ಉಚ್ಚಾಟಿತರಾದ ಇನ್ನೊಬ್ಬ ಶಾಸಕ ಗುಂಡಪ್ಪ ವಕೀಲ್ ಸುದ್ದಿಗೋಷ್ಠಿಯಲ್ಲಿ ಇರಲಿಲ್ಲ.
ಮಲ್ಯ ಅವರ ದುಡ್ಡಿನಾಸೆಗೆ ನಾವು ಯಾಕೆ ಮತ ಹಾಕಬೇಕಿತ್ತು ಎಂದು ಪ್ರಶ್ನಿಸಿದ ಕೃಷ್ಣಪ್ಪ, ತಮ್ಮ ಉಚ್ಚಾಟನೆ ಪೂರ್ವ ನಿಯೋಜಿತ ಮತ್ತು ಏಕಪಕ್ಷೀಯವಾದುದು ಎಂದು ದೂರಿದರು.
ಪಕ್ಷವನ್ನು ಕೆಡಿಸಿರುವ ಅನಂತಕುಮಾರ್ ಮತ್ತು ವೆಂಕಯ್ಯನಾಯ್ಡು ಅವರಿಗೆ ಉಚ್ಚಾಟನೆ ಎಂಬುದು ಮಕ್ಕಳಾಟವಾಗಿದೆ. ಶಾಲೆಯಲ್ಲಿ ಹುಡಗರು ತೆಗೆದುಕೊಳ್ಳುವಂತಹ ನಿರ್ಣಯಗಳನ್ನು ಇವರು ತೆಗೆದುಕೊಳ್ಳುತ್ತಿದ್ದಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮತ್ತೊಬ್ಬ ಬಿಜೆಪಿ ಶಾಸಕ ಪುಟ್ಟ ರಂಗನಾಥ್- ಉಚ್ಚಾಟಿತ ಶಾಸಕರ ನಿಲುವನ್ನು ಬೆಂಬಲಿಸಿದ್ದಲ್ಲದೆ, ತಮ್ಮನ್ನೂ ಪಕ್ಷದಿಂದ ಉಚ್ಚಾಟಿಸಲಿ. ನಾಯಕತ್ವದ ಕೊರತೆಯಿರುವ ಬಿಜೆಪಿ ಹೇಗಾಗಿದೆ ನೋಡಿ ಎಂದರು.
ಬುಧವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ 10 ಶಾಸಕರು ಜನತಾ ಪರಿವಾರ ಬೆಂಬಲಿತ ಅಭ್ಯರ್ಥಿ ವಿಜಯ್ ಮಲ್ಯ ಅವರಿಗೆ ಮತಗಳನ್ನು ಹಾಕಿರುವುದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಒಡಕಿಗೆ ಹಿಡಿದ ಕನ್ನಡಿ ಇದಾಗಿದೆ. ಉಚ್ಚಾಟಿತ ಶಾಸಕರೆಲ್ಲಾ ಬೇರೆ ಪಕ್ಷಗಳಿಂದ ಬಂದು ಬಿಜೆಪಿಗೆ ಸೇರಿದ್ದವರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...