ಬಿಸಿಲ ಕೂಸುಗಳು ಬಂದಿದ್ದಾರೆ, ಸ್ವಲ್ಪ ಎಸಿ ಸ್ವಿಚ್ ಹಾಕ್ತೀರಾ....
ರಾಜ್ಯದ ದೇವಸ್ಥಾನಗಳಲ್ಲಿ ಜಾತ್ರೆಗಳ ಮೆರವಣಿಗೆ. ತೇರುಗಳು, ಉತ್ಸವ, ಪಲ್ಲಕಿ ಭಜನೆ... ಹುಣ್ಣಿಮೆ ಇದಿರು ನೋಡುತ್ತಿರುವ ಬಾನ ಬೆಳಕಿನಲ್ಲಿ ಸಂಭ್ರಮ. ಆದರೆ ಹವೆಯಲ್ಲಿ ತಂಪಿಲ್ಲ.
ಪಕ್ಕದಲ್ಲಿ ಕುಳಿತವರ ಶರಟು ಮುಂಗೈಗೆ ತಾಗಿದರೂ ಅಸಹನೆ. ಕಿರಿಕಿರಿ. ಎಸಿ ಆಫೀಸಿನಲ್ಲಿ ಕುಳಿತವರಿಗೆ ಕರೆಂಟು ಕೈಕೊಟ್ಟರೆ ಸಿಟ್ಟು. ಹಳ್ಳಿಗಳಲ್ಲಿ ತೋಟದಲ್ಲಿ ತೆಂಗಿನ ಗರಿಗಳ ಮೇಲೆ ಮೈ ಚೆಲ್ಲಿದವರಿಗೆ ನಾಲ್ಕು ಹನಿಯಾದರೂ ಮಳೆ ಉದುರಿದರೆ ಚೆಂದಾದೀತು ಎಂಬ ಆಸೆ. ಹೈವೇಗಳಲ್ಲಿ ಓಡುವ ಭೂತಾಕಾರದ ಟ್ಯಾಂಕರ್ಗಳಲ್ಲಿ ಮೈ ಬಿಟ್ಟುಕೊಂಡು ಡ್ರೆೃವ್ ಮಾಡುವ ಕೆಂಗಣ್ಣಿನ ಡ್ರೆೃವರ್ಗಳು.
ಬಾವಿಯಲ್ಲಿ ತಳ ಸೇರಿದ ನೀರಿಗೆ ಕೊಡಪಾನ ಎಟುಕಲಿ ಅಂತ ತಂದಿಟ್ಟ ಉದ್ದನೆಯ ಹಗ್ಗ. ಪಕ್ಕದ ಮನೆ, ಪಕ್ಕದ ಊರಿಗೇ ಕೊಡಪಾನ ಹಿಡಿದುಕೊಂಡು ನೀರು ತರಲು ಹೋಗುವ ಸಾಹಸಿ ಸ್ತ್ರೀಯರು. ನೀರಿಲ್ಲದ ನದಿಯ ಬದಿಯಲ್ಲಿ ಹೊಯ್ಗೆ ತೋಡಿ ಮಾಡಿದ ಹೊಂಡದಲ್ಲಿ ದಿನ ದಿನವೂ ಆಳಕ್ಕೆ ಓಡುವ ನೀರು. ರಾಜ್ಯದಲ್ಲಿ ಬೇಸಗೆಯ ಸುಸ್ತು. ಬಿಸಿಲ ಬೇಗೆಯ ತಾಳದ ಮುಖದಲ್ಲಿ ಸಂಜೆಗೆ ಮುನ್ನವೇ ಬಳಲಿಕೆ.
ಬೇಸಗೆ ಬಿಸಿಯ ಭವಿಷ್ಯವೇ ?
ಬೆಳಗೆದ್ದರೆ ತುಟಿಯ ಕೆಳಗೆ ಗೆರೆಗಟ್ಟುವ ಬೆವರು. ರೆಗ್ಯುಲೇಟರನ್ನು ಮುಕ್ಕಾಲು ಸುತ್ತು ತಿರುಗಿಸಿಟ್ಟು ಹಾಕಿದ ಫ್ಯಾನು ದಿನಪೂರ್ತಿ ಸುತ್ತುತ್ತಿರುತ್ತದೆ. ಬಿಸಿನೀರಿನ ಹಂಗು ಬಿಟ್ಟು ತಿಂಗಳಾದವು. ಶಿವರಾತ್ರಿಗೂ ಮುಂಚೆ ಮೀಸೆ ನುಸುಳಿಸಿಕೊಂಡು ಬಂದ ಸೆಕೆ ರಾಯಪ್ಪ ಬೆಂಗಳೂರನ್ನು ಅಟ್ಟಿಸಿ ಅಟ್ಟಿಸಿ ಬೆವರಿಳಿಸುತ್ತಿದ್ದಾನೆ.
ಒಂದು ಕಾಲದಲ್ಲಿ ಬೇಸಗೆಯ ರಾಜಧಾನಿ ಎಂಬ ತಂಪು ಬಿರುದು ಕಟ್ಟಿಕೊಂಡಿದ್ದ ಬೆಂಗಳೂರಿಗೆ ಈಗ ಆ ಬಿರುದು ಮಾಜಿಯಾಗಿದೆ. ಹವಾಮಾನ ಇಲಾಖೆ ಹೇಳುವ ಪ್ರಕಾರ ಈ ಬೇಸಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಲಾಖೆಯ ನಿರ್ದೇಶಕ ಎ.ಎಲ್. ಕೊಪ್ಪಾರ್ ಹೇಳುವುದು ಬೇಸಗೆಯ ಬಿಸಿಯ ಭವಿಷ್ಯ ಹೇಳುವುದು ಕಷ್ಟದ ಕೆಲಸ.
ಪ್ರತಿಮಧ್ಯಾಹ್ನವೂ ಮಧ್ಯಾಹ್ನ ಮಾತ್ರ ತಣ್ಣೀರ ಸ್ನಾನಕ್ಕೆ ದೇಹ ತಪಿಸುತ್ತಿರುತ್ತದೆ. ಮಾರ್ಚ್ ಮುಗಿದಿಲ್ಲ. ಆಗಲೇ ಏಪ್ರಿಲ್ ಅಂತ್ಯದ ಬಿರು ಬಿಸಿಲು ಬಂದುಬಿಟ್ಟಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ. ಕನಿಷ್ಠವೆಂದರೆ 23 ಡಿಗ್ರಿ.
ರಾಜ್ಯದಲ್ಲಿ ಕುಡಿಯುವ ನೀರಿಗೋಸ್ಕರ ರಾಜಕೀಯ ಘೋಷಣೆಗಳು ನಡೆಯುತ್ತಿವೆ. ಆದರೆ ಕುಸಿದ ಅಂತರ್ಜಲವನ್ನು ಮೇಲೆತ್ತುವ ಬಗ್ಗೆ ಕಾರ್ಯವಾಗಲೀ ತುಟಿಯಂಚಿನ ಮಾತಾಗಲಿ ಕೇಳುತ್ತಿಲ್ಲ. ಆದರೆ ಈ ರಾಜಕೀಯವನ್ನು ನಂಬಿಕೊಂಡು ಯಾರು ಬದುಕುತ್ತಾರೆ ಹೇಳಿ. ಕುಡಿಯುವ ನೀರಿಗೆ ತೋಚಿದ ದಾರಿ ಹಿಡಿದುಕೊಂಡು ಹೆಂಗಸರು ದಾರಿ ಸವೆಸುತ್ತಿದ್ದಾರೆ.
ಕೊನೆಯದಾಗಿ: ವಿಶ್ವಸಂಸ್ಥೆಯ ವರದಿಯಾಂದು, ಇನ್ನೂ ಕೇವಲ 23 ವರ್ಷದ ಅವಧಿಯಲ್ಲಿ ಭೂಮಿ ಮೇಲೆ ಕುಡಿಯುವ ನೀರಿಗೆ ಚೊಂಬು, ಮಗ್ ಹಿಡಿದುಕೊಂಡು ಹುಡುಕಾಡಬೇಕು ಅನ್ನುತ್ತದೆ.
ಮುಖಪುಟ / ಇವತ್ತು... ಈ ಹೊತ್ತು...