ಮುರ್ಡೋಕ್ರ ಬೇಜವಾಬ್ದಾರಿ ಹೇಳಿಕೆಗೆ ಕೇಬಲ್ ಆಪರೇಟರ್ಸ್ಕಿಡಿಕಿಡಿ
ಬೆಂಗಳೂರು: ಭಾರತದ ಕೇಬಲ್ ಟೀವಿ ಆಪರೇಟರ್ಗಳು ಸರಿಯಾಗಿ ಶುಲ್ಕ ಪಾವತಿ ಮಾಡದೇ ಮೋಸ ಮಾಡುತ್ತಿದ್ದಾರೆ ಎಂಬ ಸ್ಟಾರ್ ಟಿವಿ ಬಳಗದ ಮುಖ್ಯಸ್ಥ ರೂಪರ್ಟ್ ಮುರ್ಡೋಕ್ ಹೇಳಿಕೆಯನ್ನು ದಿ ಕರ್ನಾಟಕ ಛೇಂಬರ್ಸ್ ಆಫ್ ಕಾಮರ್ಸ್ ಸಂಸ್ಥೆ ಖಂಡಿಸಿದ್ದು ತಕ್ಷಣವೇ ಭಾರತದ ಕೇಬಲ್ ಟೀವಿ ಆಪರೇಟರ್ಗಳ ಬಳಿ ಮುರ್ಡೋಕ್ ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
ಕೇಬಲ್ ಟೀವಿ ಆಪರೇಟರ್ಗಳ ಬಳಿ ಕ್ಷಮೆ ಕೇಳಲು ನಿರಾಕರಿಸಿದಲ್ಲಿ ಸ್ಟಾರ್ ಟೀವಿ ಬಳಗದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಎಚ್ಚರಿಕೆ ನೀಡಿ ಛೇಂಬರ್ ಆಫ್ ಕಾಮರ್ಸ್, ಮುರ್ಡೋಕ್ ಅವರಿಗೆ ಪತ್ರ ಬರೆದಿದೆ.
ಸ್ವಯಂ ಉದ್ಯೋಗ ಕಂಡುಕೊಂಡಿರುವ ಕೇಬಲ್ ಟೀವಿ ಆಪರೇಟರ್ಗಳನ್ನು ಬಳಸಿಕೊಂಡು ಸ್ಟಾರ್ ಟೀವಿ ಉದ್ಯಮವನ್ನು ಬೆಳೆಸಿಕೊಂಡ ಮುರ್ಡೋಕ್, ಡಿಟಿಎಚ್ ಮೂಲಕ ಹಿಂಬಾಗಿಲಿನಿಂದ ಪ್ರೇಕ್ಷಕರನ್ನು ತಲುಪುವ ಹುನ್ನಾರ ನಡೆಸಿದ್ದಾರೆ ಎಂದು ಪತ್ರದಲ್ಲಿ ಆಪಾದಿಸಲಾಗಿದೆ.
ಭಾರತದ ಕೇಬಲ್ ಟೀವಿ ಜಾಲದಿಂದ ವಾರ್ಷಿಕ 2,500 ಕೋಟಿ ರೂಪಾಯಿ ಹಣ ಹರಿದುಬರುತ್ತಿದೆ. ಇದಕ್ಕೆ ಪ್ರತಿಯಾಗಿ ಮುರ್ಡೋಕ್ ಭಾರತಕ್ಕೆ ಯಾವ ರೀತಿಯಲ್ಲಿ ನೆರವಾಗಿದ್ದಾರೆ, ಸರಕಾರಕ್ಕೆ ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ, ಯಾವ ವಿಧದಲ್ಲಿ ಸಾಮಾಜಿಕ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಪ್ರಶ್ನೆಗಳನ್ನು ಮುರ್ಡೋಕ್ ಅವರಿಗೆ ಪತ್ರದ ಮೂಲಕ ಕೇಳಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...