ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಮ, ನಾನು ಹನುಮ : ಡಿ.ಕೆ.ಶಿವಕುಮಾರ್
ಬೆಂಗಳೂರು : ರಾಮನಿಗೆ ಹನುಮ ಬಂಟ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ನಾನು ಬಂಟ. ಆದರೆ ಹನುಮನಂತೆ ನನ್ನ ನಿಷ್ಠೆಯನ್ನು ಹೃದಯ ಬಗೆದು ತೋರಿಸಲು ಸಾಧ್ಯವಾಗದು !
ಸಹಕಾರ ಸಚಿವ ಡಿ.ಕೆ.ಶಿವಕುಮಾರ್ ಉರುಫ್ ಡಿಕೇಶಿ, ಸೋಮವಾರ ಸಂಜೆವಾಣಿ ಪತ್ರಿಕೆ ಜೊತೆ ಮಾತಾಡಿರುವ ಪರಿಯಿದು. ಮೊನ್ನೆ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಮುಖ್ಯಮಂತ್ರಿ ಕೃಷ್ಣ ಅವರ ಬಗ್ಗೆ ಡಿಕೇಶಿ ಅಸಮಾಧಾನದ ಮಾತುಗಳನ್ನಾಡಿದ್ದಾರೆ ಎಂದು ಸುದ್ದಿ ಹಬ್ಬಿದೆ. ಇದು ಹುರುಳಿಲ್ಲದ್ದು. ನನ್ನ ಹಾಗೂ ಮುಖ್ಯಮಂತ್ರಿಗಳ ಬಾಂಧವ್ಯದ ಬೆಸುಗೆ ಒಡೆಯುವ ದೊಡ್ಡ ಹುನ್ನಾರವಿದು ಎಂದಿದ್ದಾರೆ ಡಿಕೇಶಿ.
ಮುಖ್ಯಮಂತ್ರಿಗಳು ಯುವಕರ ಬೆನ್ನು ತಟ್ಟಿದ್ದಾರೆ. ವಿಧಾನ ಪರಿಷತ್ ಹಾಗೂ ನಿಗಮ ಮಂಡಳಿಗಳ ಹುದ್ದೆಗಳಲ್ಲಿ ಯುವಕರಿಗೆ ಹೆಚ್ಚು ಪ್ರಾತಿನಿಧ್ಯ ದೊರಕಿದೆ. ಅವರ ಬೆಂಬಲದಿಂದ ನಾನು ಸಾಕಷ್ಟು ಬೆಳೆದಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಇಷ್ಟರ ಮಟ್ಟಿಗೆ ನಾನು ಬೆಳೆದಿರುವುದನ್ನು ಸಹಿಸದೆ ಕಿಡಿಗೇಡಿಗಳು ಸಂಚು ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳ ಕೈ ಬಲಪಡಿಸುವುದು ನನ್ನ ಪರಮ ಗುರಿ. ಹೀಗಿರುವಾಗ ಅವರ ಕಾರ್ಯವೈಖರಿ ಬಗ್ಗೆ ನಾನು ಅಪಸ್ವರ ಎತ್ತಿದ್ದೇನೆ ಎಂದು ಟೀಕಿಸುವುದಾದರೂ ಹೇಗೆ? ಪಕ್ಷದ ಹಾಗೂ ಮುಖ್ಯಮಂತ್ರಿಗಳ ಬಲ ವರ್ಧನೆಗೆ ಯಾವುದೇ ತ್ಯಾಗ ಮಾಡಲು ನಾನು ಸಿದ್ಧ. ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವುದಾದರೂ ಏಕೆ ಎಂದು ತನಿಖೆ ನಡೆಸಲು ಪಕ್ಷದ ಅಧ್ಯಕ್ಷರನ್ನು ಮುಖ್ಯಮಂತ್ರಿಗಳು ಕೋರಿದ್ದಾರೆ. ರಾಮನಿಗೆ ಆಂಜನೇಯ ಹೇಗೆ ಬಂಟನೋ, ಹಾಗೆಯೇ ನಾನು ಕೃಷ್ಣ ಅವರಿಗೆ ಬಂಟ. ನಾನೇನು ಎಂಬುದು ಅವರಿಗೆ ಗೊತ್ತಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ