ಅಮೆರಿಕಾದ ಸಿಎಚ್ಎಲ್ನಿಂದ 50 ಜನರಿಗೆ ಉಚಿತ ಹೃದಯ ಕವಾಟ
ಬೆಂಗಳೂರು : ಗಂಟಲು ಬೇನೆಯಿಂದ ಹೃದಯ ಬೇನೆ ಬರುತ್ತದಾ? ನಿರ್ಲಕ್ಷಿಸಿದರೆ ಬರುವ ಸಾಧ್ಯತೆಯಂತೂ ಇದೆ ಎನ್ನುತ್ತಾರೆ ರಾಷ್ಟ್ರದ ಶ್ರೇಷ್ಠ ಹೃದಯ ತಜ್ಞರಲ್ಲಿ ಒಬ್ಬರಾದ ನಾರಾಯಣ ಹೃದಯಾಲಯದ ಡಾ। ದೇವಿ ಪ್ರಸಾದ್ ಶೆಟ್ಟಿ .
ಗಂಟಲು ಬೇನೆ ಮೂಲಕ ರೋಗಾಣುವೊಂದು ಹೃದಯ ಕವಾಟ ಪ್ರವೇಶಿಸುವುದರಿಂದ ಹೃದ್ರೋಗ ಉಂಟಾಗಬಹುದು. ಭಾರತದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಮೆರಿಕ ಹಾಗೂ ಯುರೋಪ್ನ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಮೂರು ಪಟ್ಟು ಹೆಚ್ಚು ಜನ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದು ಡಾ।ದೇವಿಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶದಲ್ಲಿ ಪ್ರತಿದಿನ 300 ಮಕ್ಕಳು ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಹೃದ್ರೋಗಕ್ಕೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇವೆ ಎಂದು ವಿಷಾದಿಸಿದ ದೇವಿಶೆಟ್ಟಿ , ಹೃದ್ರೋಗದ ಬಗ್ಗೆ ಜನತೆಯಲ್ಲಿ ತಿಳಿವಳಿಕೆ ಮೂಡಿಸಲು ನಾರಾಯಣ ಹೃದಯಾಲಯದಲ್ಲಿ ಪ್ರತ್ಯೇಕ ವಿಭಾಗ ಪ್ರಾರಂಭಿಸುತ್ತಿರುವುದಾಗಿ ಹೇಳಿದರು.
ಅಮೆರಿಕಾದ ಮಕ್ಕಳ ಹೃದಯ ಸಂಪರ್ಕ ಸಂಸ್ಥೆ (ಸಿಎಚ್ಎಲ್) 50 ಜನರಿಗೆ ಉಚಿತವಾಗಿ ಹೃದಯ ಕವಾಟಗಳನ್ನು ಅಳವಡಿಸಲು ನೆರವು ನೀಡಿದೆ. ಅತ್ಯಂತ ದುಬಾರಿಯಾದ ಈ ಕವಾಟುಗಳನ್ನು ಬಡ ರೋಗಿಗಳಿಗೆ ಅಳವಡಿಸಲಾಗುವುದು. ಕವಾಟಗಳನ್ನು ಅಳವಡಿಸುವ ಉದ್ದೇಶದಿಂದ ಅಲ್ಲಿನ ವೈದ್ಯರ ತಂಡ ಬೆಂಗಳೂರಿಗೆ ಆಗಮಿಸಲಿದೆ ಎಂದು ದೇವಿಶೆಟ್ಟಿ ತಿಳಿಸಿದರು. ಈ ವೈದ್ಯರ ತಂಡದಲ್ಲಿ ಭಾರತೀಯ ವೈದ್ಯರಾದ ಡಾ। ವಿಭು ಆರ್.ಕೆ. ಶೆಟ್ಟಿ, ಡಾ। ರಾಜಾರಾವ್ ದ್ವಾರಕಾನಾಥ್ ಸೇರಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...