‘ವಿಕೃತ ಕಾಮಿ ಉಮೇಶ್ ರೆಡ್ಡಿ ಬೆಂಗಳೂರಲ್ಲಿದ್ದಾನೆ, ಎಚ್ಚರದಿಂದಿರಿ’
ಬೆಂಗಳೂರು : ಪೊಲೀಸ್ ಕಸ್ಟಡಿಯಿಂದ 5 ನೇ ಸಲ ತಪ್ಪಿಸಿಕೊಂಡಿರುವ ವಿಕೃತ ಕಾಮಿ ಉಮೇಶ್ ರೆಡ್ಡಿ ನಗರದಲ್ಲೇ ಇರುವ ನಿರೀಕ್ಷೆಯಿದ್ದು, ನಾಗರಿಕರು ಎಚ್ಚರಿಕೆಯಿಂದಿರುವಂತೆ ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ಮನವಿ ಮಾಡಿದ್ದಾರೆ.
ಪೀಣ್ಯ, ದಾಸರಹಳ್ಳಿ, ಜಾಲಹಳ್ಳಿ, ಯಲಹಂಕ ಮೊದಲಾದ ಕಡೆ ಅನೇಕ ಅತ್ಯಾಚಾರ, ಕೊಲೆಗಳನ್ನು ಮಾಡಿರುವ ಉಮೇಶ್ ರೆಡ್ಡಿ ಬಹುರೂಪಿ. ಕೆಟ್ಟಿರುವ ವಸ್ತುಗಳ ರಿಪೇರಿ ಮಾಡಲು, ನೀರು ಕೇಳಲು, ಭಿಕ್ಷೆ ಬೇಡಲು ಮನೆಗಳ ಕದ ತಟ್ಟುವ ಈತ ವಿಕೃತ ಮನಸ್ಕ. ಕೆಲವು ಪೊಲೀಸರ ಪ್ರಕಾರ ಶವ ಸಂಭೋಗಿ.
ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಉಮೇಶ್ ರೆಡ್ಡಿ, ಇತ್ತೀಚೆಗೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದಾನೆ. ಈತ ತಪ್ಪಿಸಿಕೊಂಡಿರುವುದು ಇದು ಐದನೇ ಬಾರಿ. ಒಂಟಿ ಮನೆಯಲ್ಲಿನ ಹೆಂಗಸರು, ಹೆಣ್ಣು ಮಕ್ಕಳು ಎಚ್ಚರಿಕೆಯಿಂದಿರಬೇಕು. ಅನುಮಾನಾಸ್ಪದ ವ್ಯಕ್ತಿಯನ್ನು ಕಂಡರೆ ಅಥವಾ ಅದು ಉಮೇಶ್ ರೆಡ್ಡಿ ಎಂಬ ಗುಮಾನಿ ಬಂದರೆ ತಕ್ಷಣವೆ ಹತ್ತಿರದ ಪೊಲೀಸರಿಗೆ ತಿಳಿಸಬೇಕು ಎಂದು ಸಾಂಗ್ಲಿಯಾನ ಹೇಳಿದ್ದಾರೆ.
ಉಮೇಶ್ ರೆಡ್ಡಿ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 100 ಅಥವಾ (080) 3323666/2250373/2942299 ನಂಬರುಗಳಿಗೆ ಫೋನಾಯಿಸಿ.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನಾ ವಾಚ್