ಮಾ. 23: ಶಿರಸಿ ಸ್ವರ್ಣವಲ್ಲೀ ಸ್ವಾಮೀಜಿಗಳ ಪೀಠಾರೋಹಣ ದಶಮಾನೋತ್ಸವ
ಬೆಂಗಳೂರು : ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಪೀಠಾರೋಹಣ ದಶಮಾನೋತ್ಸವವು ಮಾರ್ಚ್ 23ರಂದು ಆರಂಭವಾಗಲಿದೆ.
ಎರಡು ದಿನಗಳ ಕಾಲ ನಡೆಯುವ ದಶಮಾನೋತ್ಸವ ಸಮಾರಂಭ ವನ್ನು ಶಿರಸಿಯ ಸ್ವರ್ಣವಲ್ಲೀ ಮಠದಲ್ಲಿ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಅಭಿಯಾನ ಮತ್ತು ಪುರಶ್ಚರಣ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಪೀಠಾರೋಹಣ ದಶಮಾನೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಸ್ವರ್ಣವಲ್ಲೀ ಶ್ರೀಗಳ ಸಾಧನೆಗಳ ಕುರಿತ ‘ನನ್ನ ಪ್ರೀತಿಯ ಸ್ವಾಮೀಜಿ’ ಪುಸ್ತಕ ಬಿಡುಗಡೆ, ಸುಧರ್ಮಾ ಸಭಾ ಭವನ ಹಾಗೂ ಅಕ್ಷಯ ಭವನಗಳ ಉದ್ಘಾಟನಾ ಕಾರ್ಯಕ್ರಮಗಳನ್ನೂ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ. ವಿವಿಧ ಮಠಾಧೀಶರು, ಭಕ್ತರು ಮತ್ತು ಧರ್ಮಗುರುಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ದಶಮಾನೋತ್ಸವವನ್ನು ಕೇಂದ್ರ ಸಚಿವ ಅನಂತ ಕುಮಾರ್ ಉದ್ಘಾಟಿಸುವರು. ತೋಂಟದ ಸಿದ್ಧಲಿಂಗ ಮಹಾಸ್ವಾಮಿ ಹಾಗೂ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳು ಸಾನ್ನಿಧ್ಯವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...