ಯಾರಿಗೂ ಬೇಡವಾದ ಶಿಲೆ ಕಾಯುವ ಕೆಲಸ,ವಾಜಪೇಯಿಗೆ ತ್ರಾಸು
ಲಖನೌ : ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆಂದು ದಾನ ಪಡೆದ ಶಿಲೆಗಳನ್ನು ಕಾಪಿಡುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.
ರಾಮಮಂದಿರ ನಿರ್ಮಾಣ ನ್ಯಾಸ್ ಅಧ್ಯಕ್ಷ ರಾಮಚಂದ್ರ ದಾಸ್ ಪರಮಹಂಸ ಅವರಿಂದ ಸರ್ಕಾರದ ಪ್ರತಿನಿಧಿಯಾಗಿ ಮಾರ್ಚ್ 15ರಂದು ಶಿಲೆಗಳನ್ನು ದಾನ ಪಡೆದ ಶತ್ರುಘ್ನ ಸಿಂಗ್, ಅದನ್ನು ಕಾಪಾಡುವಂತೆ ಜಿಲ್ಲಾಧಿಕಾರಿಗೆ ಹೇಳಿದರು. ಆದರೆ, ಸಿಂಗ್ ಅವರ ಆಜ್ಞೆಯನ್ನು ಜಿಲ್ಲಾ ಅಧಿಕಾರಿ ಪಾಲಿಸುತ್ತಿಲ್ಲ ಎಂಬುದು ಪರಮಹಂಸರ ಹೊಸ ಆರೋಪ.
ಈ ಸಮಸ್ಯೆ ಕುರಿತಂತೆ ಸರ್ಕಾರಕ್ಕೆ ಸಾಕಷ್ಟು ದೂರುಗಳು ಹೋಗಿದ್ದರೂ, ಪ್ರಧಾನಿ ಕಚೇರಿಯಿಂದ ಈವರೆಗೆ ಶಿಲೆಗಳ ರಕ್ಷಣೆಯ ಬಗ್ಗೆ ಯಾವುದೇ ನಿರ್ದೇಶನ ಬಂದಿಲ್ಲ. ಈ ಶಿಲೆಗಳು ಮಂದಿರ ನಿರ್ಮಾಣದ ಕನಸನ್ನು ಕಟ್ಟಿಕೊಂಡಿರುವ ಸಹಸ್ರಾರು ಕರ ಸೇವಕರ ಭಾವನೆಗಳ ಪ್ರತೀಕ. ಸುಂದರ ಕೆತ್ತನೆ ಒಳಗೊಂಡಿರುವ ಶಿಲೆಗಳು ಕೊಂಚ ಹಾಳಾದರೂ, ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅದು ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಶಿಲೆಗಳ ಹೊಣೆ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸೇರಿದ್ದು. ಅದರ ರಕ್ಷಣೆಯ ಹೊಣೆ ನನ್ನದಲ್ಲ ಎನ್ನುತ್ತಾರೆ ಫೈಜಾಬಾದ್ ಜಿಲ್ಲಾಧಿಕಾರಿ ಎ.ಕೆ.ಗುಪ್ತ. ಅಯೋಧ್ಯೆಯ ಮುಖ್ಯ ಪುರೋಹಿತರಿಗೂ ಅದರ ರಕ್ಷಣೆಯ ತ್ರಾಸು ಬೇಕಿಲ್ಲ. ತಿಳಿಗೊಳ್ಳುತ್ತಿರುವ ಅಯೋಧ್ಯೆಯ ಪರಿಸ್ಥಿತಿಯ ಮತ್ತೆ ಕದಡುವ ಸಮಸ್ಯೆಯಾಗಿ ಶಿಲೆಗಳ ರಕ್ಷಣೆಯ ವಿಷಯ ತಲೆದೋರುತ್ತಿದೆ. ಪ್ರಧಾನಿ ವಾಜಪೇಯಿ ಈ ಕಗ್ಗಂಟು ಬಿಡಿಸಲು ಏನು ಮಾಡುತ್ತಾರೋ ನೋಡಬೇಕು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...