ಹಿಂದುಳಿದ ಗಡಿ ತಾಲ್ಲೂಕುಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್: ಬರಗೂರು
ಬೆಂಗಳೂರು : ರಾಜ್ಯದ ಗಡಿ ಪ್ರದೇಶಗಳಲ್ಲಿರುವ 52 ತಾಲ್ಲೂಕುಗಳ ಪೈಕಿ 19 ತಾಲ್ಲೂಕುಗಳು ತೀರಾ ಹಿಂದುಳಿದಿವೆ. ಅವುಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕಾಮಗಾರಿ ಜಾರಿಗೆ ತರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ನೇತೃತ್ವದ ಗಡಿನಾಡು ಅಧ್ಯಯನದ ಏಕ ವ್ಯಕ್ತಿ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಬರಗೂರು ರಾಮಚಂದ್ರಪ್ಪ ಸೋಮವಾರ ತಮ್ಮ ಅಧ್ಯಯನದ ವರದಿ ಸಲ್ಲಿಸಿದರು. ಗಡಿನಾಡು ಶಿಕ್ಷಣ ನಿರ್ದೇಶನಾಲಯದ ಸ್ಥಾಪನೆ, ಸಮಗ್ರ ಸಮೀಕ್ಷೆ ನಡೆಸುವುದರ ಮೂಲಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಗಡಿ ಪ್ರದೇಶಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಪ್ರತ್ಯೇಕ ಹಣ ಮೀಸಲು ಮುಂತಾದ ಪ್ರಮುಖ ಶಿಫಾರಸುಗಳನ್ನು ಬರಗೂರರ ವರದಿ ಒಳಗೊಂಡಿದೆ.
ಪಾವಗಡ, ಆಳಂದ, ಜೋಯಿಡಾ, ಭಾಲ್ಕಿ, ಬಸವ ಕಲ್ಯಾಣ, ಅಫ್ಜಲ್ಪುರ, ಔರಾದ್, ಚಿಂಚೋಳಿ, ಬಂಗಾರಪೇಟೆ, ಗುಡಿಬಂಡೆ, ಬಾಗೇಪಲ್ಲಿ, ಕೆಜಿಎಫ್, ರಾಯಚೂರು, ಮೊಳಕಾಲ್ಮೂರು, ಮಾನ್ವಿ, ಸುಳ್ಯ, ಖಾನಾಪುರ, ಚಿಕ್ಕೋಡಿ ಹಾಗೂ ಅಥಣಿ ಇವು ಬರಗೂರರ ಆಯೋಗ ಗುರ್ತಿಸಿರುವ ಗಡಿನಾಡಿನ ಹಿಂದುಳಿದ ತಾಲ್ಲೂಕುಗಳು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...