ಗಾಣಿಗಾ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ವಿರೋಧಿಸಿ ವೃಕ್ಷಲಕ್ಷ ಆಂದೋಳನ
ಶಿವಮೊಗ್ಗ : ಇಲ್ಲಿನ ಹೊಸನಗರ ತಾಲ್ಲೂಕಿನ ಗಾಣಿಗಾ ಗ್ರಾಮದ ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡಲು ಪರಿಸರವಾದಿ ಅನಂತ ಹೆಗ್ಡೆ ಅಶೀಸರ ನೇತೃತ್ವದ ವೃಕ್ಷ ಲಕ್ಷ ಆಂದೋಲನ ನಿರ್ಧರಿಸಿದೆ.
ಗಾಣಿಗಾ ಪ್ರದೇಶದ ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಲು ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಕೆಲವು ವ್ಯಕ್ತಿಗಳು ನಡೆಸುತ್ತಿರುವ ಖಾಸಗಿ ಗಣಿಗಾರಿಕೆಯಿಂದ ಪರಿಸರದ ಮೇಲೆ ಗಂಭೀರ ಪರಿಣಾಮವುಂಟಾಗುತ್ತದೆ. ಪಕ್ಕದಲ್ಲಿಯೇ ಇರುವ ಶರಾವತಿ ಕೊಳ್ಳದ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ ಎಂದು ಪರಿಸರವಾದಿಗಳು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಶವಪುರ, ಮಾರುತಿಪುರ, ಹರಿದ್ರಾವತಿ, ದರೋಡೆಕಾನು ಮತ್ತಿತರ ಹಳ್ಳಿಗಳ ಜನರು ಅಕ್ರಮ ಗಣಿಗಾರಿಕೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಯುವಕ ಸಂಘಗಳು, ಗೋಮಾಳ ಉಳಿಸಿ ಹೋರಾಟ ಸಮಿತಿ, ಗ್ರಾಮ ವಿಕಾಸ ಸಂಘ, ಭಾರತೀ ಮಹಿಳಾ ಸಮಾಜ, ಚೆನ್ನಕೇಶವ ಸೇವಾ ಸಮಿತಿ, ವೃಕ್ಷ ಜಾಗೃತಿ ವೇದಿಕೆ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಸಸ್ಯ ಶಾಸ್ತ್ರಜ್ಞರಾದ ಡಾ. ಸುಭಾಶ್ ಚಂದ್ರನ್, ಪ್ರೊ. ಕೇಶವ ಎಚ್. ಕೊರ್ಸೆ ಈ ಪ್ರದೇಶಕ್ಕೆ ಭೇಟಿ ನೀಡಿ ,ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದು ಸಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...