ಉದ್ದೇಶ ಉಪದೇಶ ನಡುವೆ ಅಂತರ- ರಾಜ್ಯಪಾಲೆ ರಮಾದೇವಿ ಜಿಜ್ಞಾಸೆ
ಬೆಂಗಳೂರು : ಪ್ರತಿದಿನ ನಗರದಲ್ಲಿ ಎಷ್ಟೊಂದು ಕಾರ್ಯಕ್ರಮಗಳು ನಡೆಯುತ್ತವೆ! ಯಾವುದೋ ದಿನಾಚರಣೆ, ಹುಟ್ಟು ಹಬ್ಬ, ಪ್ರಶಸ್ತಿ ವಿತರಣೆ, ಸಾಂಕೇತಿಕ ಹೋರಾಟ, ಸಮ್ಮೇಳನ... ಆದರೆ, ಧನ್ಯವಾದ ಸಮರ್ಪಣೆಯ ನಂತರ ಕಾರ್ಯಕ್ರಮದ ಹಿಂದಿನ ಉದ್ದೇಶವೇನು ಎಂಬುದನ್ನು ಎಷ್ಟು ಮಂದಿ ನೆನಪಿಟ್ಟುಕೊಳ್ಳುತ್ತಾರೆ ಹೇಳಿ.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ರಾಜಕಾರಣಿ ರಾಶಿ ಭರವಸೆಗಳನ್ನು ನೀಡಿ, ಸಾಲು ಸಾಲು ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡು ಕಾರು ಹತ್ತುವಾಗ ತನ್ನ ಭರವಸೆಗಳನ್ನು ಮನಸ್ಸಿನಲ್ಲಾಗಲೀ, ಡೈರಿಯಲ್ಲಾಗಲಿ ಗುರುತು ಹಾಕಿಕೊಳ್ಳುತ್ತಾನೆಯೇ..? ಹೀಗೆ ಉದ್ದೇಶದ ಕಡೆಗೆ ಗಮನ ಕೊಡದೆಯೇ ಬರೇ ಷೋಕಿಗಾಗಿ, ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಮಾಡುವವರ ವಿರುದ್ಧ ರಾಜ್ಯಪಾಲರಾದ ವಿ.ಎಸ್. ರಮಾದೇವಿ ಸಿಟ್ಟಾಗಿದ್ದಾರೆ.
ಅದು ವಿಶ್ವ ಬಳಕೆದಾರರ ಹಕ್ಕು ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ. ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ , ಕೈಗಾರಿಕಾ ಒಕ್ಕೂಟ ಮತ್ತು ಬಳಕೆದಾರರ ಹಕ್ಕು ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ರಮಾದೇವಿ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮ ಅದ್ಧೂರಿಯಾಗಿಯೇ ಇತ್ತು.
‘ಇಂತಹ ದಿನಾಚರಣೆಗಳ ಬಗ್ಗೆ ನನಗೆ ರೋಸಿ ಹೋಗಿದೆ. ಸಂಜೆ ಹೊತ್ತಿಗೆ ಸಮಾರಂಭ ಮುಗಿದುಹೋಗುತ್ತದೆ. ಅದರೊಂದಿ ಗೇ ಸಮಾರಂಭ ಆಯೋಜಿಸಿದ್ದ ಹಿಂದಿರುವ ಉದ್ದೇಶವೂ ಮುಗಿದೇ ಹೋಗುತ್ತದೆ. ಈಗೀಗ ಬೇರೆ ಬೇರೆ ಉದ್ದೇಶಗಳಿಗೆ ಸಪ್ತಾಹ, ಮಾಸಾಚರಣೆಗಳನ್ನೂ ಮಾಡುತ್ತಾರೆ. ಬರೇ ಘೋಷಣೆಯಾಧಾರಿತ ಕಾರ್ಯಕ್ರಮಗಳಿಗೆ ಯಾಕಿಷ್ಟು ಹಣ ದುಂದು ಮಾಡಬೇಕು?’
ತಮ್ಮ ಭಾಷಣದಲ್ಲಿ ಜಾಹೀರಾತುಗಳಲ್ಲಿ ಮಿಂಚುವ ಮಾಡೆಲ್ ಹುಡುಗಿಯರ ಬಗ್ಗೆಯೂ ರಮಾದೇವಿ ಕಿಡಿ ಕಾರಿದರು. ‘ಈ ಮಾಡೆಲ್ ಹೆಂಗಸರು ಸಿಗರೇಟು, ಮದ್ಯದ ಜಾಹೀರಾತಿನಲ್ಲಿ ಮೋಡಿ ಮಾಡುತ್ತಾರೆ. ಗಂಡ ಮೂಗಿನ ತನಕ ಕುಡಿದು ಮನೆಗೆ ಬಂದರೆ ಯಾವ ಹೆಂಗಸು ತಾನೆ ಇಷ್ಟ ಪಡುತ್ತಾಳೆ ಹೇಳಿ ನೋಡುವ. ವಾಸ್ತವ ಮತ್ತು ನಾವು ದಿನ ನಿತ್ಯ ಮಾಡುವ ಕೆಲಸಗಳಲ್ಲಿ ಎಷ್ಟೊಂದು ವ್ಯತ್ಯಾಸ !’
‘ಕಾರ್ಯಕ್ರಮ ಆಯೋಜಕರೂ ಅಷ್ಟೆ. ದಿನಾಚರಣೆಗಳ ಬಗ್ಗೆ ಗಂಟೆಗಟ್ಟಲೆ ಭಾಷಣಗಳನ್ನು ಮಾಡಿ, ಮಾಡಿಸಿ, ಕಾರ್ಯರೂಪದಲ್ಲಿ ಮಾತ್ರ ಆ ಉದ್ದೇಶಗಳ ಕಡೆಗೆ ಅವರು ಗಮನ ಕೊಡುವುದಿಲ್ಲ. ದಿನಾಚರಣೆ ಪ್ರಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಮತ್ತು ವೇದಿಕೆಗಳಲ್ಲಿ ಭಾಷಣ ಮಾಡಲು ಅವಕಾಶ ಪಡೆಕೊಳ್ಳುವುದು ಆಯೋಜಕರ ಉದ್ದೇಶವಾಗಬಾರದು.’
ರಾಜ್ಯಪಾಲರು, ಬಳಕೆದಾರರ ಹಕ್ಕಿನ ಬಗೆಗೇನಾದರೂ ಒಳ್ಳೆ ಮಾತಾಡಬಹುದು ಎಂದು ನಿರೀಕ್ಷಿಸಿದ್ದ ಸಭಿಕರು ರಮಾದೇವಿ ಅವರ ಬೈಗುಳದ ಮಾತು ಕೇಳಿ ಬೆಕ್ಕಸ ಬೆರಗಾಗುತ್ತಿದ್ದಂತೆಯೇ ಕೊನೆಯದಾಗಿ, ಎಂದು ಬಳಕೆದಾರರ ದಿನದ ಬಗ್ಗೆ ರಾಜ್ಯಪಾಲರು ಮಾತಾಡಿದರು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಬಳಕೆದಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೇಜಾರು ಮಾಡಿಕೊಂಡು ವಿದ್ಯುತ್ ಖರೀದಿಸುವವರಿಗೆ ಒಂದೆರಡು ಸಲಹೆ ಇತ್ತರು.
ಇತ್ತೀಚಿನ ವರದಿಯಾಂದನ್ನು ಉಲ್ಲೇಖಿಸಿ, ನಗರದಲ್ಲಿ ಮಾರಲ್ಪಟ್ಟ ಶೇ 90ರಷ್ಟು ಚಿನ್ನ ಶುದ್ಧವಾದುದಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಜಾಗತೀಕರಣ ಮತ್ತು ಉದಾರೀಕರಣ ಯುಗದಲ್ಲಿ ನಾವೂ ಸಹ್ಯ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಬಹುದಲ್ಲ ಎಂದು ತಮ್ಮ ಅಭಿಪ್ರಾಯ ಮಂಡಿಸಿ ಮಾತು ಮುಗಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ