ವಿವಾದಿತ ಪ್ರದೇಶದಿಂದಾಚೆ ಶಿಲಾದಾನ- ರಾಮಚಂದ್ರ ಪರಮ ಹಂಸ
ಅಯೋಧ್ಯಾ: ವಿವಾದಿತ ಪ್ರದೇಶದ ಹೊರ ವಲಯದಲ್ಲಿರುವ ರಾಮಕೋಟ್ ಮೊಹಲ್ಲಾದಲ್ಲಿ ಶಿಲಾದಾನ ಕಾರ್ಯಕ್ರಮ ನಡೆಸಲು ರಾಮಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮಚಂದ್ರ ದಾಸ್ ಪರಮ ಹಂಸ ಅವರು ಒಪ್ಪಿಕೊಂಡಿದ್ದಾರೆ.
ರಾಮಕೋಟ್ ಮೊಹಲ್ಲಾದಲ್ಲಿ ಶಿಲಾ ದಾನ ಮಾಡುವುದಾಗಿ ಹೇಳಿದ್ದರೂ ಶಿಲಾದಾನ ಕಾರ್ಯಕ್ರಮ ನಡೆಯುವ ನಿರ್ದಿಷ್ಟವಾದ ಜಾಗವನ್ನು ತಿಳಿಸಲು ಪರಮಹಂಸರು ನಿರಾಕರಿಸಿದ್ದಾರೆ. ತಾವು ಸುಪ್ರಿಂ ಕೋರ್ಟ್ ಆಜ್ಞೆಯನ್ನು ಪಾಲಿಸುತ್ತಿದ್ದು, ವಿವಾದಿತ ಭೂಮಿಯಿಂದಾಚೆಗೆ ಶಿಲಾದಾನ ಕಾರ್ಯವನ್ನು ನೆರವೇರಿಸುವುದಾಗಿ ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಪರಮಹಂಸರು ತಿಳಿಸಿದರು.
ಗೃಹ ಸಚಿವ ಎಲ್. ಕೆ. ಅಡ್ವಾಣಿ, ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್, ಉತ್ತರ ಪ್ರದೇಶ ಸರಕಾರದ ಪ್ರತಿನಿಧಿಗಳು ಮತ್ತು ವಿಶ್ವ ಹಿಂದೂ ಪರಿಷತ್ನ ಹಿರಿಯ ಅಧಿಕಾರಿಗಳ ನಡುವೆ ನಡೆದ ಸಂಧಾನದ ಫಲವಾಗಿ ಪರಮಹಂಸರು ತಮ್ಮ ನಿರ್ಧಾರವನ್ನು ಬದಲಿಸಲು ಒಪ್ಪಿಕೊಂಡಿದ್ದಾರೆ.
ಈ ಹಠಾತ್ ಬದಲಾವಣೆಯ ಹಿಂದಿರುವ ಕಾರಣಗಳ ಬಗ್ಗೆ ಕೇಳಿದಾಗ, ತಾವು ವಿವಾದಿತ ಜಾಗದಲ್ಲಿ ಒಂದು ಹೆಜ್ಜೆಯನ್ನು ಕೂಡ ಇಡದೇ ಇರಲು ನಿರ್ಧರಿಸಿರುವುದಾಗಿ ಪರಮಹಂಸರು ಹೇಳಿದ್ದಾರೆ. ಶುಕ್ರವಾರ ಮಧ್ಯಾಹ್ನ 2.15ಕ್ಕೆ ಶಿಲಾ ದಾನ ಕಾರ್ಯಕ್ರಮ ನಡೆಸಿದ ನಂತರ ಪರಮಹಂಸರು ರಾಮ್ಲಾಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಲಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...