ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವ್ಯಾಟ್: ವಾಣಿಜ್ಯ/ಕೈಗಾರಿಕೆಗೆ ಟಾನಿಕ್- ವಿದೇಶಿ ಕಂಪನಿಗಳಿಗೆ ಲಗಾಮು
*ಸದಾಶಿವ ಕೆ.
ಮಂಗಳೂರು : ಮೌಲ್ಯ ವರ್ಧಿತ ತೆರಿಗೆಯಿಂದ ಯಾವುದೇ ಹಾನಿ ಇಲ್ಲ. ಈ ತೆರಿಗೆಯ ಜಾರಿಯಿಂದ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಹೆಚ್ಚು ತೊಂದರೆಯಾಗುವುದು ತಪ್ಪುತ್ತದೆ ಎಂದು ತೆರಿಗೆ ಸುಧಾರಣಾ ಆಯೋಗದ ಸದಸ್ಯ ಕಾರ್ಯದರ್ಶಿ ಡಾ. ರೇಣುಕಾ ವಿಶ್ವನಾಥನ್ ಅಭಿಪ್ರಾಯ ಪಟ್ಟಿದ್ದಾರೆ.
ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಬಗ್ಗೆ ನಗರದ ಹೊಟೆಲ್ ತಾಜ್ ಮಂಜೂರಾನ್ನಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈಗಿರುವ ತೆರಿಗೆ ಪದ್ಧತಿಯಿಂದಾಗಿ ಕೈಗಾರಿಕೆಗಳ ನೋಂದಣಿಗೆ ಬಹಳ ತೊಂದರೆಯಾಗುತ್ತದೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕೆಗಳ ನೋಂದಣಿ ಕಷ್ಟವಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ ಎಂದು ರೇಣುಕಾ ವಿಶ್ವನಾಥನ್ ಹೇಳಿದರು. ಅವರ ಮಾತಿನ ಮುಖ್ಯಾಂಶಗಳು:
- ವಿಶ್ವ ವ್ಯಾಪಾರ ಸಂಘಟನೆಗೆ ಮತ್ತು ನಮ್ಮ ದೇಶೀಯ ಕೈಗಾರಿಕೆ ಮತ್ತು ಆರ್ಥಿಕ ವಲಯಕ್ಕೆ ಹೆಚ್ಚು ಸ್ಪರ್ಧಾತ್ಮಕ ಅವಕಾಶಗಳಿರುವುದರಿಂದ ನಮ್ಮ ತೆರಿಗೆ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ವಿದೇಶೀ ಕಂಪೆನಿಗಳ ಬಾಹುಳ್ಯವನ್ನು ನಮ್ಮ ದೇಶದ ಮಾರುಕಟ್ಟೆಯ ಮೇಲೆ ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.
- ವ್ಯಾಟ್ನಿಂದಾಗಿ, ಲೆಕ್ಕಪತ್ರಗಳನ್ನು ಸರಿಯಾಗಿ ಕಾಪಾಡಿಕೊಂಡು ಬರುವುದು ಮತ್ತು ಹೊಸ ಕೈಗಾರಿಕೆ ಅಥವಾ ವಾಣಿಜ್ಯ ಸಂಬಂಧೀ ನೋಂದಣಿಗೆ ಹಳೆಯ ರೀತಿಯಂತೆ ಸಮಸ್ಯೆಗಳು ಬರಲಾರವು.
- ಮೊದಲ ಬಾರಿಗೆ ವ್ಯಾಟ್ ಬಂದಾಗ ಇದು ಕೇವಲ ವಿಶ್ವವಿದ್ಯಾಲಯಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಚರ್ಚೆಯ ವಿಷಯವಾಗಿತ್ತೇ ಹೊರತು, ಯಾರಿಗೂ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಬೇರೆ ಬೇರೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಆಸಕ್ತಿಯಿಂದಾಗಿ ಇಂದು ಜನಸಾಮಾನ್ಯರಲ್ಲಿ ವ್ಯಾಟ್ ಬಗ್ಗೆ ತಿಳುವಳಿಕೆ ಮೂಡಲು ಆರಂಭವಾಗಿದೆ. ಇದು ಒಂದು ಉತ್ತಮ ಬೆಳವಣಿಗೆ.
- ಅಡಿಕೆಯನ್ನು ವ್ಯಾಟ್ ತೆರಿಗೆ ಪದ್ಧತಿಯಿಂದ ಹೊರಗಿಡಬೇಕು ಎಂದು ಇತ್ತೀಚೆಗೆ ಎದ್ದ ಮಾತಿನ ಕುರಿತು ಪ್ರಸ್ತಾಪಿಸಿದ ಡಾ. ರೇಣುಕಾ- ನಾನು ದೆಹಲಿಯಲ್ಲಿ ಅಡಿಕೆ ಬೆಳೆಗಾರರ ಪ್ರತಿನಿಧಿಗಳೊಡನೆ ವ್ಯಾಟ್ ಬಗ್ಗೆ ಮತ್ತು ಅದರ ಪರಿಣಾಮ ಅಡಿಕೆಯ ಮೇಲೆ ಹೇಗಿರಬಹುದು ಎಂದು ಕೇಳಿದಾಗ, ಅವರಲ್ಲಿ ಉತ್ತರವಿರಲಿಲ್ಲ . ವಿಷಯದ ಸಂಪೂರ್ಣ ಅರಿವು ಆದಮೇಲೆ ಮಾತನಾಡಬೇಕು ಎಂದರು.
- ವ್ಯಾಟ್ನ ಜಾರಿಯಿಂದ ರಾಜ್ಯ ಸರಕಾರಗಳಿಗೆ ಆಗುವ ನಷ್ಟವನ್ನು ತಡೆಯಲು ಎಲ್ಲ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿಗಳು ಕೇಂದ್ರ ಸರಕಾರದ ಮೇಲೆ ರಾಜ್ಯಗಳು ಸೇವಾ ತೆರಿಗೆ ವಿಧಿಸಲು ಅನುವಾಗುವಂತೆ ಸರಕಾರ ಶಾಸನ ರೂಪಿಸುವಂತೆ ಮಾಡಲು ಒತ್ತಡ ತರಬೇಕು.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, March 11, 2002, 5:30 [IST]