ಉತ್ತರ ಕರ್ನಾಟಕದ ಎಲ್ಲ ಗ್ರಾಮಗಳಿಗೂ ಬಸ್ಸು -ಜೈರಾಜ್ ಘೋಷಣೆ
ಹುಬ್ಬಳ್ಳಿ: ಇನ್ನೊಂದು ವರ್ಷದ ಅವಧಿಯಾಳಗೆ ಉತ್ತರ ಕರ್ನಾಟಕದ ಎಲ್ಲ ಗ್ರಾಮಗಳಿಗೂ ಬಸ್ ಸೌಲಭ್ಯವನ್ನು ಒದಗಿಸುವುದಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಘೋಷಿಸಿದೆ.
ಈ ನಿಟ್ಟಿನಲ್ಲಿ ಖಾಸಗಿ ಬಸ್ಗಳನ್ನು ಬಾಡಿಗೆಗೆ ಪಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಗ್ರಾಮದ ರಸ್ತೆ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಯ ಜೊತೆ ಮಾತುಕತೆ ನಡೆಸಲಾಗುವುದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಜೈರಾಜ್ ಹೇಳಿದ್ದಾರೆ.
ಭಾನುವಾರ ನಡೆದ ರಾಜ್ಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಸಭೆಯ ನಂತರ ಜೈರಾಜ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಒಟ್ಟು 40 ಖಾಸಗಿ ಬಸ್ಗಳನ್ನು ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು 60 ಬಸ್ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಮಾತುಕತೆ ಮುಂದುವರೆದಿದೆ.
ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಹಾಗೂ ಗೋವಾ ರಾಜ್ಯಗಳ ಜೊತೆ ಹೊಸ ಬಸ್ ಸಂಚಾರಕ್ಕಾಗಿಯೂ ಒಪ್ಪಂದಗಳನ್ನು ಮಾಡಿಕೊಳ್ಳುವ ಯೋಚನೆಯಿದೆ ಎಂದು ಹೇಳಿದ ಜೈರಾಜ್ ಇತ್ತೀಚಿನ ಕೋಮು ಗಲಭೆ ಹಾಗೂ ಸಾರ್ವಜನಿಕರ ಪ್ರತಿಭಟನೆಯಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ಸುಮಾರು 2 ಕೋಟಿ ರೂಪಾಯಿ ನಷ್ಟವಾಗಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...