ಉತ್ತರ ಪ್ರದೇಶ : ವಿಧಾನಸಭೆ ಅಮಾನತು, ರಾಷ್ಟ್ರಪತಿ ಆಡಳಿತ ಹೇರಿಕೆ?
ನವದೆಹಲಿ : ಉತ್ತರ ಪ್ರದೇಶದ ನೂತನ ವಿಧಾನಸಭೆಯನ್ನು ಅಮಾನ್ತತಿನಲ್ಲಿಟ್ಟು , ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವಂತೆ ರಾಜ್ಯಪಾಲ ವಿಷ್ಣುಕಾಂತ್ ಶಾಸ್ತ್ರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಯಾವುದೇ ಪಕ್ಷವೂ ಸರ್ಕಾರವನ್ನು ರಚಿಸಲು ಅಗತ್ಯವಾದ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಂಡಿರುವ ರಾಜ್ಯಪಾಲ ವಿಷ್ಣುಕಾಂತ ಶಾಸ್ತ್ರಿ ಅವರು, ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಬುಧವಾರ ರಾತ್ರಿ ಶಿಫಾರಸ್ಸು ಕಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರ ರಚನೆಯ ವಿಷಯದಲ್ಲಿ ತನ್ನ ನಿಲುವನ್ನು ಮಾರ್ಚ್ 6 ರೊಳಗೆ ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಪಾಲರು ತಿಳಿಸಿದ್ದರು. ಸಮಾಜವಾದಿ ಪಕ್ಷವನ್ನು ಬೆಂಬಲಿಸುವ ಇಂಗಿತವನ್ನು ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಆಲಿಘರ್ನಲ್ಲಿ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್ ಹಾಗೂ ಎಸ್ಪಿ ಒಮ್ಮತದ 145 ಸದಸ್ಯ ಬಲ ಸರ್ಕಾರ ರಚನೆಗೆ ಸಾಕಾಗುವುದಿಲ್ಲ .
ಈ ನಡುವೆ ಭಾರತೀಯ ಜನತಾಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕಲ್ರಾಜ್ ಮಿಶ್ರ ಅವರು ತಮ್ಮ ಪಕ್ಷ ರಾಷ್ಟ್ರಪತಿ ಆಡಳಿತ ಹೇರಿಕೆಯ ಕುರಿತು ಒಲವು ಹೊಂದಿರುವುದಾಗಿ ತಿಳಿಸಿದ್ದಾರೆ. ಸರ್ಕಾರ ರಚಿಸಲು ಸಿದ್ಧ ಎಂದು ಸಮಾಜವಾದಿ ಪಕ್ಷ ಪದೇಪದೇ ಹೇಳುತ್ತಿದ್ದರೂ, ತನ್ನ ಬೆಂಬಲಿಗರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿಲ್ಲ.
ಮಾಯಾವತಿ ಲೋಕಸಭೆಗೆ ರಾಜೀನಾಮೆ : ಉತ್ತರಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿರುವ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಬಿಎಸ್ಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಮಾಯಾವತಿ, ಪಕ್ಷದ ವರಿಷ್ಠ ಕಾನ್ಷಿರಾಂ ಸೂಚನೆಯ ಮೇರೆಗೆ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...