ಅಹ್ಮದಾಬಾದ್ನಲ್ಲಿ ಇನ್ನೂ 38 ಶವ ಪತ್ತೆ,ಗುಜರಾತಲ್ಲಿ ಸತ್ತವರ ಸಂಖ್ಯೆ 607
ಅಹ್ಮದಾಬಾದ್ : ಕಳೆದ ವಾರ ನಡೆದ ಭೀಕರ ಹತ್ಯಾಕಾಂಡದಲ್ಲಿ ಮೃತಪಟ್ಟವರ ಸಂಖ್ಯೆ ಈಗ ಅಧಿಕೃತವಾಗಿ 607. ನಗರದಲ್ಲಿ ಬುಧವಾರ 38 ಹೆಣಗಳನ್ನು ಹೆಕ್ಕಲಾಗಿದೆ. ಈ ಪೈಕಿ 30 ದೇಹಗಳು ಸುಟ್ಟು ಕರಕಲಾಗಿವೆ.
ಅಹ್ಮದಾಬಾದ್ನಲ್ಲಿ ಅಘೋಷಿತ ಮೌನ. ಕರ್ಫ್ಯೂ ಸಡಿಲಿಕೆಯಾದರೂ ಬೆಂಕಿ ಬಿದ್ದ ಜಾಗೆಗಳಲ್ಲಿ ಹೊಗೆ ಇನ್ನೂ ಆಡುತ್ತಿದೆ. ಇದೇ ಸಮಯದಲ್ಲಿ ದುಡೇಶ್ವರ, ಜುಹಾಪುರ ಮತ್ತು ಸರ್ಖೇಜ್ನ ಸ್ಮಶಾನಗಳಲ್ಲಿ 212 ದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ ನಡೆದಿದೆ. ಸೂರತ್ನಲ್ಲಿ 3 ಹಾಗೂ ಸಬರ್ಕಾಂತಾ ಜಿಲ್ಲೆಯಲ್ಲಿ 5 ಮೃತ ದೇಹಗಳು ಪತ್ತೆಯಾಗಿವೆ. ಸುಟ್ಟ ಮನೆ- ಅಂಗಡಿಗಳಲ್ಲಿ ಹೆಣಗಳ ಹುಡುಕಾಟ ಮುಂದುವರೆದಿದೆ.
ಗಲಭೆ ವೇಳೆ ನಡೆದ ಹಗಲು ದರೋಡೆಯಲ್ಲಿ ಗರ್ಭಿಣಿ ಶಾಮೀಲು
ಗೋದ್ರಾ ರೈಲಿಗೆ ಬೆಂಕಿ ಇಟ್ಟ ನಂತರ, ಭುಗಿಲೆದ್ದ ಗಲಭೆಯನ್ನೇ ಬಂಡವಾಳವನ್ನಾಗಿಸಿಕೊಂಡ ಶ್ರೀಮಂತರ ಪೈಕಿ ಓರ್ವ ಗರ್ಭಿಣಿಯೂ ಇದ್ದಾಳೆ. ಇವರೆಲ್ಲಾ ಈಗ ನಾರಾಣ್ಪುರ ಪೊಲೀಸ್ ಠಾಣೆ ಅತಿಥಿಗಳು. ಅಹ್ಮದಾಬಾದ್ನಲ್ಲಿ ಗಲಭೆ, ಹತ್ಯಾಕಾಂಡಗಳು ನಡೆದ ವೇಳೆಯಲ್ಲಿ ಸಿಕ್ಕ ಸಿಕ್ಕದ್ದನ್ನೆಲ್ಲಾ ದೋಚಿ ಪರಾರಿಯಾದವರ ಪೈಕಿ ಶ್ರೀಮಂತರೇ ಹೆಚ್ಚು. ಅಂಗಡಿ- ಮುಂಗಟ್ಟುಗಳಿಗೆ ನುಗ್ಗಿ, (ಅದರಲ್ಲೂ ವಿಶೇಷವಾಗಿ ದುಬಾರಿ ವಸ್ತುಗಳ ದುಕಾನು ಹಾಗೂ ಒಡವೆ ಅಂಗಡಿಗಳು) ಮಾಲನ್ನು ಚೀಲಕ್ಕೆ ತುಂಬಿಕೊಂಡು ಕಾರಿನಲ್ಲಿ ಪರಾರಿಯಾದದ್ದನ್ನು ಕಂಡ ಪೊಲೀಸರು, ಈ ಪೈಕಿ ಮೂವತ್ತು ಮಂದಿಯನ್ನು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಬಿ.ಡಿ.ಟಂಡೆಲ್ ಹೇಳುವಂತೆ- ಇದೊಂದು ಹೇಯಕರ ಸಂಗತಿ. ಗರ್ಭಿಣಿ ಹೆಂಗಸೊಬ್ಬಳು ಉರಿಯುತ್ತಿರುವ ಮನೆಯ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವ ಕೆಲಸ ಮಾಡಿರುವುದು ಮಾನವೀಯತೆಯ ದುರಂತ. ದೊಡ ಪ್ರಮಾಣದ ಗಲಭೆಗಳು ನಡೆದಾಗ ಪೊಲೀಸರಿಗೆ ಸಹಕರಿಸಬೇಕಾದ ನಾಗರಿಕರೇ ಹೀಗೆ ಮಾಡಿದರೆ ಸಮಾಜ ಇನ್ನಷ್ಟು ಹದಗೆಡುತ್ತದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...