ವೀರಪ್ಪನ್ಗೆ ಕಾಯಿಲೆ? ‘ಇಂದ’-‘ಗೆ’ ವಿವರ ಇರದ ಪತ್ರ ತಂದ ಗುಮಾನಿ
ಕೊಯಮತ್ತೂರು: ವೀರಪ್ಪನ್ ಕಾಯಿಲೆ ಬಿದ್ದಿದ್ದಾನೆಯೇ?
ಸಿರುಮುಗೈ ಪ್ರದೇಶದ ಅಂಚೆ ಡಬ್ಬವೊಂದರಲ್ಲಿ ಸಿಕ್ಕಿರುವ ಪತ್ರ ವೀರಪ್ಪನ್ ಅನಾರೋಗ್ಯದ ಗುಮಾನಿಗೆ ಕಾರಣವಾಗಿದೆ. ವೀರಪ್ಪನ್ ಸಹಚರನೊಬ್ಬ ಬರೆದಿದ್ದಾನೆ ಎನ್ನಲಾದ ಈ ಪತ್ರದಲ್ಲಿ ಬರೆದವರ ಅಡ್ರೆಸ್ಸೂ ಇಲ್ಲ , ತಲುಪಬೇಕಾದವರ ವಿಳಾಸವೂ ಇಲ್ಲ .
ವಾರಸುದಾರರ ಗುಟ್ಟು ಬಿಟ್ಟುಕೊಡದ ಈ ಅಂಚೆ ಲಕೋಟೆಯಲ್ಲಿ ಐದು .22 ಬುಲೆಟ್ಗಳು ಹಾಗೂ ಪತ್ರವೊಂದು ದೊರಕಿವೆ. ‘ಇಂದ’ ಹಾಗೂ ‘ಗೆ’ ವಿವರಗಳಿರದ ಈ ಶಂಕಾಸ್ಪದ ಲಕೋಟೆಯನ್ನು ಗಮನಿಸಿ ಅಚ್ಚರಿಗೊಂಡ ಅಂಚೆಯಣ್ಣ ಲಕೋಟೆಯನ್ನು ಸಿರುಮುಗೈ ಪೊಲೀಸರಿಗೆ ತಲುಪಿಸಿದ್ದಾನೆ. ಲಕೋಟೆಯನ್ನು ಪರಿಶೀಲಿಸಿದ ಪೊಲೀಸರಿಗೆ ದೊರೆತದ್ದು ಬುಲೆಟ್ಟುಗಳು ಹಾಗೂ ಒಂದು ಪತ್ರ.
ವೀರಪ್ಪನ್ ಆರೋಗ್ಯ ಸರಿಯಾಗಿಲ್ಲ . ಔಷಧಿ ಕೊಳ್ಳಲು ಅರ್ಜೆಂಟಾಗಿ ದುಡ್ಡು ಬೇಕಾಗಿದೆ ಎಂದು ವೀರಪ್ಪನ್ ಅನುಚರನೊಬ್ಬ ಪತ್ರದಲ್ಲಿ ಬರೆದಿದ್ದಾನೆ. ಸಂದೇಶಕಾರನ ಮೂಲಕ ಹಣ ಕಳಿಸುವಂತೆಯೂ ಪತ್ರದಲ್ಲಿ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಸ್ಫೋಟಕಗಳ ಕಾಯ್ದೆ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.
ಬಾಲಂಗೋಚಿ : ಔಷಧಿ ಕೊಳ್ಳಲು ವೀರಪ್ಪನಿಗೆ ದುಡ್ಡು ಬೇಕಂತೆ, ಅಣ್ಣಾವ್ರ ಅಪಹರಣದಲ್ಲಿ ಗೋಪಾಲ್ ಕೊಂಡು ಹೋದದ್ದು ಇಷ್ಟು ಬೇಗ ಖರ್ಚಾಯಿತೇ?
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ