ಇ-ಲರ್ನಿಂಗ್ ಶಾಲೆ : ಬೆಂಗಳೂರಲ್ಲಿ ಸಿದ್ಧಗಂಗಾ ಮಠದ ವಿದ್ಯಾದಾಸೋಹ
ಬೆಂಗಳೂರು : ವಿದ್ಯಾ ದಾಸೋಹದಲ್ಲಿ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ಸಿದ್ಧಗಂಗಾ ಕ್ಷೇತ್ರ ಬೆಂಗಳೂರಿನಲ್ಲೂ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಿದ್ದು , ನಗರದ ಚಂದ್ರಾ ಲೇಔಟ್ನಲ್ಲಿ ಸಿದ್ಧಗಂಗಾ ಆಧುನಿಕ ಶಾಲೆ ತಲೆಯೆತ್ತುತ್ತಿದೆ.
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಆಧರಿತ (ಇ-ಲರ್ನಿಂಗ್) ಶಿಕ್ಷಣವನ್ನು ನೀಡುವ ಗುರಿ ಹೊಂದಿರುವ ಸಿದ್ಧಗಂಗಾ ಆಧುನಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ 10 ನೇ ತರಗತಿಯವರೆಗೆ ಕಲಿಕೆಗೆ ಅವಕಾಶವಿದೆ. ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಪೀಠ ಟ್ರಸ್ಟ್ ಹಾಗೂ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಈ ಶಾಲೆಯನ್ನು ಸ್ಥಾಪಿಸಿವೆ.
ಜೂನ್ ತಿಂಗಳಿಂದ ಶಾಲೆ ಆರಂಭವಾಗಲಿದ್ದು , ಭಾನುವಾರ ಶಾಲೆಯ ನಿರ್ಮಾಣ- ಚಟುವಟಿಕೆಗಳ ಕುರಿತು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಾಲೆಗೆ ತಮ್ಮಿಂದ ಸಾಧ್ಯವಾಗುವ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದರು. 35 ಲಕ್ಷ ರುಪಾಯಿ ವೆಚ್ಚದಲ್ಲಿ , 11 ಸಾವಿರ ಚದರ ಮೀಟರ್ ಜಾಗೆಯಲ್ಲಿ ಶಾಲೆ ರೂಪುಗೊಳ್ಳುತ್ತಿದೆ.
ಪೂರ್ವಭಾವಿ ಸಭೆಯಲ್ಲಿ ಸಿದ್ಧಗಂಗೆಯ ಡಾ।ಶಿವಕುಮಾರ ಸ್ವಾಮೀಜಿ, ರಾಜ್ಯಸಭಾ ಸದಸ್ಯೆ ಡಾ। ಸೆಲ್ವಿದಾಸ್, ವಿಧಾನ ಪರಿಷತ್ ವಿರೋಧಿ ಉಪ ನಾಯಕ ಬಸವರಾಜ ಬೊಮ್ಮಾಯಿ, ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಸಾ.ಶಿ.ಮರುಳಯ್ಯ, ನೇತ್ರತಜ್ಞ ಡಾ। ಎಂ.ಸಿ.ಮೋದಿ, ನಿವೃತ್ತ ಪೊಲೀಸ್ ಅಧಿಕಾರಿ ಎಲ್.ರೇವಣಸಿದ್ಧಯ್ಯ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...