ಮಾರ್ಚ್ 14 ರಂದು ಕರ್ನಾಟಕ ರಾಜ್ಯ ಬಜೆಟ್ ಮಂಡನೆ
ಬೆಂಗಳೂರು : ಕೇಂದ್ರ ರೈಲ್ವೆ ಸಚಿವ ನಿತೀಶ್ಕುಮಾರ್ 2002-03ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದ್ದಾಗಿದೆ. ಬಹುನಿರೀಕ್ಷಿತ ಕೇಂದ್ರ ಬಜೆಟ್ ಅನ್ನು ಗುರುವಾರ ಯಶವಂತ ಸಿನ್ಹ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಮಧ್ಯೆ ಕರ್ನಾಟಕ ರಾಜ್ಯದ ವರ್ಷದ ಆಯ-ವ್ಯಯ ಮಾರ್ಚ್ 14ರಂದು ಮಂಡನೆ ಆಗಲಿದೆ.
ಮಾರ್ಚ್ 14 ರಂದು ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಅಂದು ಮಧ್ಯಾಹ್ನ 2ಗಂಟೆಗೆ ವಿಧಾನಸಭೆಯಲ್ಲಿ ರಾಜ್ಯದ 2002-03 ನೇ ಸಾಲಿನ ಬಜೆಟ್ನ್ನು ಮಂಡಿಸುವ ನಿರೀಕ್ಷೆಯಿದೆ.
ಮುಖ್ಯಮಂತ್ರಿಗಳು ಬಜೆಟ್ ಮಂಡಿಸಿದ ತರುವಾಯ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಕನಕಪುರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ಪ್ರಸ್ತಾಪ ಆಗುವ ಸಾಧ್ಯತೆ ಇದ್ದು, ಪ್ರತಿಪಕ್ಷಗಳು ಸಹಕಾರ ಸಚಿವ ಡಿ.ಕೆ. ಶಿವಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುವರೆಂದು ನಿರೀಕ್ಷಿಸಲಾಗಿದೆ. ನಕಲಿ ಛಾಪಾಕಾಗದ ಹಗರಣವೂ ಮತ್ತೆ ವಿಧಾನಮಂಡಳದಲ್ಲಿ ಪ್ರತಿಧ್ವನಿಸುವ ಲಕ್ಷಣಗಳು ಕಂಡು ಬಂದಿವೆ.
ಮುಖಪುಟ / ಇವತ್ತು... ಈ ಹೊತ್ತು...