16 ಹೊಸ ಜನಶತಾಬ್ದಿ ರೈಲು, ಅದರಲ್ಲೊಂದು ಬೆಂಗಳೂರು-ಹುಬ್ಬಳ್ಳಿ ನಡುವೆ
ನವದೆಹಲಿ : 1,360 ಕೋಟಿ ರುಪಾಯಿಗಳ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಅಲ್ಪ ಪ್ರಮಾಣದ ಪ್ರಯಾಣ ಹಾಗೂ ಸರಕು ಸಾಗಣೆ ದರ ಹೆಚ್ಚಳದ ರೈಲ್ವೆ ಬಜೆಟ್ -2002-03ನ್ನು ಮಂಗಳವಾರ ಕೇಂದ್ರದ ರೈಲ್ವೆ ಖಾತೆ ಸಚಿವ ನಿತೀಶ್ ಕುಮಾರ್ ಮಂಡಿಸಿದರು.
ಪ್ರಯಾಣ ದರ ಹೆಚ್ಚಳದಿಂದ ರೈಲ್ವೆ ಇಲಾಖೆಗೆ ಮುಂದಿನ ಆರ್ಥಿಕ ವರ್ಷದಲ್ಲಿ 910 ಕೋಟಿ ರುಪಾಯಿ ಹಾಗೂ ಸರಕು ಸಾಗಣೆ ದರ ಹೆಚ್ಚಳದಿಂದ 450 ಕೋಟಿ ರುಪಾಯಿಗಳು ಲಭ್ಯವಾಗಲಿವೆ ಎಂದು ನಿತೀಶ್ಕುಮಾರ್ ಲೋಕಸಭೆಯಲ್ಲಿ ತಿಳಿಸಿದರು. ದ್ವಿತೀಯ ದರ್ಜೆ ಪ್ರಯಾಣದ ಕನಿಷ್ಠ ದರದಲ್ಲಿ ಒಂದು ರುಪಾಯಿಯಷ್ಟು ಏರಿಕೆ ಮಾಡಲಾಗಿದೆ. ಆದರೆ, ರಾಜಧಾನಿ ಹಾಗೂ ಶತಾಬ್ದಿ ಎಕ್ಸ್ಪ್ರೆಸ್ ರೈಲು ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ರೈಲ್ವೆ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶುದ್ಧ ಕುಡಿವ ನೀರು ಮಾರಾಟ ಮಾಡುವ ರೈಲ್ನೀರ್ ಯೋಜನೆ ಸಿದ್ಧಪಡಿಸಲಾಗಿದೆ. ಶತಾಬ್ದಿ ಹಾಗೂ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಆಹಾರ ನೀಡಲು 2002-03ರ ರೈಲ್ವೆ ಬಜೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಸ್ಥಳದಿಂದ ಟಿಕೆಟ್ ಬುಕ್ ಮಾಡಲು, ಕಂಪ್ಯೂಟರ್ ಆಧಾರಿತ ಮೀಲಸಾತಿಯೇತರ ಟಿಕೆಟ್ ಪದ್ಧತಿ ಜಾರಿ, ರೈಲು ದುರಂತ ತಪ್ಪಿಸಲು ಡಿಕ್ಕಿ ನಿರೋಧಕ ರಕ್ಷಾಕವಚ ಅಭಿವೃದ್ಧಿ, ಕೆಟ್ಟು ಹೋಗುವ ಅಥವಾ ಕೊಳೆತು ಹೋಗುವ ವಸ್ತುಗಳ ಸಾಗಾಣಿಕೆಗಾಗಿ ಶೀತಲೀಕರಣ ಪಾರ್ಸಲ್ ವ್ಯಾನ್ ಸೌಲಭ್ಯ, ಒಟ್ಟು 25 ಹೊಸ ಎಕ್ಸ್ಪ್ರೆಸ್ ರೈಲು ಆರಂಭ, ಹಾಲಿ ಇರುವ 700 ಪ್ರಯಾಣಿಕರ ಟಿಕಟ್ ಕಾಯ್ದಿರಿಸುವಿಕೆ ಕೇಂದ್ರಗಳ ಜೊತೆ ಹೆಚ್ಚುವರಿಯಾಗಿ 150 ಕೇಂದ್ರ ಸ್ಥಾಪಿಸುವ ವಿಷಯವನ್ನೂ ಈ ಬಜೆಟ್ ಒಳಗೊಂಡಿದೆ.
ಜನಶತಾಬ್ದಿ ರೈಲು : ನಿರೀಕ್ಷೆಯಂತೆಯೇ ಹೊಸ ‘ಜನ ಶತಾಬ್ದಿ’ ಎಕ್ಸ್ಪ್ರೆಸ್ ಹೆಸರಿನ ಅತಿವೇಗವಾಗಿ ಚಲಿಸುವ 16 ಇಂಟರ್ಸಿಟಿ ರೈಲುಗಳನ್ನು ಪ್ರಸಕ್ತ ವರ್ಷದಲ್ಲೇ ಆರಂಭಿಸುವುದಾಗಿ ನಿತೀಶ್ ಕುಮಾರ್ ಪ್ರಕಟಿಸಿದ್ದಾರೆ. ಇದು ರೈಲ್ವೆ ಇಲಾಖೆಯ 150ನೇ ವರ್ಷವಾಗಿದ್ದು, ಈ ಪ್ರಯುಕ್ತ ಪ್ರಸಕ್ತ ವರ್ಷವನ್ನು ಪ್ರಯಾಣಿಕರ ಸೌಕರ್ಯಗಳ ವರ್ಷ ಎಂದು ಘೋಷಿಸಿದ ನಿತೀಶ್ ಕುಮಾರ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲುಗಳು ಈಗಾಗಲೇ ಜಾಲ್ತಿಯಲ್ಲಿರುವ ಶತಾಬ್ದಿ ಮಾದರಿಯ ಸೇವಾ ಸೌಲಭ್ಯ ಒಳಗೊಂಡಿರುತ್ತವೆ. ದ್ವಿತೀಯ ದರ್ಜೆಯ ಬೋಗಿಗಳನ್ನು ಈ ರೈಲುಗಳಲ್ಲಿ ವಿಶೇಷವಾಗಿ ನಿನ್ಯಾಸಗೊಳಿಸಲಾಗಿದೆ ಎಂದರು.
ಯಾವ ಯಾವ ನಗರಗಳ ನಡುವೆ ಈ 16 ಇಂಟರ್ ಸಿಟಿ ರೈಲುಗಳು ಸಂಚರಿಸುತ್ತವೆ ಎಂಬ ವಿವರವನ್ನೂ ಅವರು ನೀಡಿದರು. ಈ 16 ರೈಲುಗಳ ಪೈಕಿ ಒಂದು ರೈಲು ಬೆಂಗಳೂರು - ಹುಬ್ಬಳ್ಳಿಯ ನಡುವೆಯೂ ಸಂಚರಿಸಲಿದೆ.
ಮುಖಪುಟ / ಇವತ್ತು... ಈ ಹೊತ್ತು...