ಮದ್ಯಪಾನಿಗಳ ಕೈಗೆ ನೀರಾ ಬಟ್ಟಲು ಕೊಟ್ಟ ಸರ್ಕಾರ-ಕನಕಗಿರಿ ಸ್ವಾಮೀಜಿ
ಚಾಮರಾಜನಗರ : ನೀರಾ ಇಳಿಸಲು ಅನುಮತಿ ನೀಡುವ ಮೂಲಕ ಸರ್ಕಾರ ಪ್ರಮಾದವನ್ನು ಮಾಡಿದೆ. ಇದರಿಂದಾಗಿ ಮದ್ಯಪಾನ ಮಾಡುವವವರಿಗೆ ಇಂಬು ನೀಡಿದಂತಾಗಿದೆ ಎಂದು ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ನೀರಾ ಬೆಳಗ್ಗಿನ ಹೊತ್ತು ಅಮೃತದ ರೂಪದಲ್ಲಿರುತ್ತದೆ. ಅದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಜನರು ಹಾಲು, ಟೀ, ಕಾಫಿ ಬದಲಿಗೆ ನೀರಾ ಕುಡಿಯಲು ತೊಡಗಿದ್ದಾರೆ. ಇದು ಹೀಗೇ ಮುಂದುವರಿದರೆ ಗಂಡಾಂತರಕ್ಕೆ ಕಾರಣವಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. ಮದ್ಯಪಾನ ವಿರೋಧಿ ಆಂದೋಲನ ಸಮಿತಿ ಇತ್ತೀಚೆಗೆ ಏರ್ಪಡಿಸಿದ್ದ ಜನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಕೆಲವು ಸಂಘ ಸಂಸ್ಥೆಗಳು ಅನುಮತಿ ನೀಡುವಂತೆ ಒತ್ತಾಯಿಸಿದ ಮಾತ್ರಕ್ಕೆ ಸರ್ಕಾರ ಮಣಿದು ಅನುಮತಿ ನೀಡಬಾರದಿತ್ತು ಎಂದು ಸ್ವಾಮೀಜಿ ಹೇಳಿದರು. ಇದೇ ಸಂದರ್ಭದಲ್ಲಿ ಮದ್ಯಪಾನ ವಿರೋಧಿ ಆಂದೋಲನದ ಜಿಲ್ಲಾ ಘಟಕವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಂಗಾಂಬಿಕಾ ಅವರು, ಮದ್ಯಪಾನದ ವಿರೋಧ ಸಂಘಟಿತ ಹೋರಾಟ ಕೈಗೆತ್ತಿಕೊಳ್ಳುವಂತೆ ಮಹಿಳೆಯರಿಗೆ ಕರೆ ನೀಡಿದರು. ಚಾಮರಾಜನಗರದ ವಿರಕ್ತ ಮಠದ ಸಿದ್ದಬಸವರಾಜಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...