ಕರಾವಳಿಯಲ್ಲಿ ವಿದೇಶೀಯರ ಅಕ್ರಮ ವ್ಯವಹಾರ : ಆರೋಪ ಸುಳ್ಳು
ಮಂಗಳೂರು : ಸ್ಥಳೀಯ ಮೀನುಗಾರರು ಆರೋಪಿಸುತ್ತಿರುವಂತೆ ವಿದೇಶೀ ಪ್ರವಾಸಿಗರು ಪಶ್ಚಿಮ ವಲಯದಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿಲ್ಲ ಎಂದು ಕರ್ನಾಟಕ ಕರಾವಳಿ ಗಾರ್ಡ್ ವಿಭಾಗದ ಕಮಾಂಡೆಂಟ್ ಅಬು ತಲ್ಲಾ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಡನೆ ಮಾತಾಡುತ್ತಿದ್ದ ತಲ್ಲಾ, ಏಳು ವರ್ಷಗಳಿಂದ ವಿದೇಶೀ ಪ್ರವಾಸಿಗರು ಬಂದು, ಹೋಗುತ್ತಿದ್ದಾರೆ. ಆದರೆ ವಹಿವಾಟು ನಡೆಸಲು ಒಂದೇ ಒಂದು ಹೊಸ ಪರವಾನಗಿಯನ್ನೂ ಮಂಜೂರು ಮಾಡಿಲ್ಲ. ಇಲ್ಲಿನ ಕರಾವಳಿ ಗಾರ್ಡನ್ನು ಸಮುದ್ರ ಸಂಚಾರಿಗಳು ಪ್ರಯಾಣಿಕರ ಮಿತ್ರ, ಪರಿಣಾಮಕಾರಿ ಹಾಗೂ ದಕ್ಷ ಎಂದು ಗುರ್ತಿಸಿದ್ದಾರೆ. ಸಮುದ್ರ ಪ್ರಕೋಪ ಮತ್ತಿತರ ಪರೀಕ್ಷಾ ಸಂದರ್ಭಗಳಲ್ಲಿ ಚುರುಕು ಕೆಲಸ ಮಾಡಲು ಗಾರ್ಡ್ ಸಜ್ಜಾಗಿದೆ. ಅಗತ್ಯ ಬಿದ್ದಾಗ ಕಳ್ಳ ವ್ಯವಹಾರ ಮಾಡುವವರ ವಿರುದ್ಧದ ಕಾರ್ಯಾಚರಣೆ ನಡೆಸಲೂ ಹಿಂಜರಿದಿಲ್ಲ ಎಂದರು.
2.1 ದಶಲಕ್ಷ ಚ.ಕಿ.ಮೀ. ಸಾಗರ ಪ್ರದೇಶದ ವಿಶೇಷ ಆರ್ಥಿಕ ವಲಯ (ಇಇಝಡ್ಎಸ್) ಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲಾಗಿದೆ. ಸಾಗರದ ನಡುವೆ ಕಳ್ಳ ವ್ಯವಹಾರ ನಡೆಸುವುದು ಅಂದುಕೊಂಡಷ್ಟು ಸುಲವಲ್ಲ. ಕರಾವಳಿ ಗಾರ್ಡ್ ಮಾಡುತ್ತಿರುವ ಕೆಲಸ ಇಷ್ಟೆ ಅಲ್ಲ. ಪರಿಸರ ಮಾಲಿನ್ಯ ನಿಯಂತ್ರಣ, ನೀರಿನ ನಡುವೆ ಅಪಘಾತಕ್ಕೆ ಸಿಲುಕುವವರ ರಕ್ಷಣೆ ಮೊದಲಾದ ಜನೋಪಕಾರಿ ಕೆಲಸಗಳನ್ನೂ ಮಾಡುತ್ತಿದೆ. ಹೀಗಿರುವಾಗ ಅಕ್ರಮ ವ್ಯವಹಾರಕ್ಕೆ ಅವಕಾಶ ಇರಲು ಸಾಧ್ಯವಿಲ್ಲ. ಮೀನುಗಾರರು ವೃಥಾ ಹುರುಳಿಲ್ಲದ ಆರೋಪ ಮಾಡಿದ್ದಾರೆ ಎಂದು ತಲ್ಲಾ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...