ದೇವಾಲಯಗಳು ಊರಿನ ಹೃದಯವಿದ್ದಂತೆ-ಬಾಲಗಂಗಾಧರನಾಥ ಸ್ವಾಮೀಜಿ
ಬೆಂಗಳೂರು : ಐಷಾರಾಮಿ ವಸ್ತುಗಳು, ಸಿನಿಮಾ ಮಂದಿರಗಳನ್ನು ತಮ್ಮ ದೇಹದಷ್ಟೇ ಪ್ರೀತಿಸುತ್ತಿರುವ ಜನರು ದೇವಾಲಯಗಳಿಗೆ ದೇಣಿಗೆ ನೀಡುವುದಕ್ಕೆ ಮಾತ್ರ ಹಿಂಜರಿಯುತ್ತಿದ್ದಾರೆ ಎಂದು ಆದಿಚುಂಚನಗಿರಿಯ ಬಾಲಗಂಗಾಧರ ನಾಥ ಸ್ವಾಮೀಜಿ ವಿಷಾದಿಸಿದ್ದಾರೆ.
ದೇವಾಲಯಗಳು ಊರಿನ ಆತ್ಮವಿದ್ದಂತೆ. ಈ ದೇವಾಲಯಗಳಿಗೆ ಜನರು ತಮ್ಮ ಆದಾಯದ ಕೆಲ ಭಾಗವನ್ನಾದರೂ ದೇಣಿಗೆ ನೀಡಬೇಕು ಎಂದು ಸ್ವಾಮೀಜಿ ಜನತೆಗೆ ಕರೆ ನೀಡಿದರು. ಶುಕ್ರವಾರ ಶ್ರೀನಗರದ ಆಂಜನೇಯ ಹಾಗೂ ವಿಶ್ವನಾಥ ಸ್ವಾಮಿ ದೇವಾಲಯಗಳ ವಿಮಾನ ಗೋಪುರದ ಮಹಾಕುಂಭಾಭಿಷೇಕ ಮಹೋತ್ಸವ ಹಾಗೂ ವಿಶ್ವನಾಥೇಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಪ್ರಾಣಿ ಪಕ್ಷಿಗಳಲ್ಲೂ ದೇವರ ಛಾಯೆಯನ್ನು ಕಾಣುವ ನಾವು- ಗಣಪನ ವಾಹನವಾದ ಇಲಿ ಬೀದಿಯಲ್ಲಿ ಕಂಡರೆ ಹೊಡೆದು ಕೊಲ್ಲುತ್ತೇವೆ. ಶನೀಶ್ವರನ ವಾಹನವಾದ ಕಾಗೆ ಮನೆಗೆ ಪ್ರವೇಶಿಸಿದರೆ, ಆ ಮನೆಯನ್ನೇ ತೊರೆಯುತ್ತೇವೆ ಎಂದು ಸ್ವಾಮೀಜಿ ಜನರ ಡಾಂಭಿಕತನವನ್ನು ಬಣ್ಣಿಸಿದರು.
ನಾಮ ಹಲವು ದೇವರೊಬ್ಬನೇ
ನಾನಾ ಮೂರ್ತಿಗಳನ್ನು ಸ್ಥಾಪಿಸಿದರೂ ಕೊನೆಯದಾಗಿ ಆರಾಧಿಸುವುದು- ಕಾಣುವುದು ಒಬ್ಬನೇ ಭಗವಂತನನ್ನು ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು. ಸಂಕಟ ಬಂದಾಗ ವೆಂಕಟರಮಣ ಅನ್ನುವುದರಿಂದ ಪ್ರಯೋಜನವಿಲ್ಲ . ಪ್ರತಿಯಾಬ್ಬರೂ ದೇವರ ಸ್ಮರಣೆ ಮಾಡುವ ಮೂಲಕ ಮಾನಸಿಕ ಯಾತನೆಗಳನ್ನು ದೂರಾಗಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಷ್ಟಾಂಗ ಯೋಗ ಮಂದಿರದ ರಂಗಪ್ರಿಯ ದೇಶಿಕ ಶ್ರೀಪಾದ ಸ್ವಾಮೀಜಿ ಅವರು ಆಂಜನೇಯ ದೇವರಿಗೆ ಕುಂಭಾಭಿಷೇಕ ಮಾಡಿದರು. ಮಾಜಿ ಮೇಯರ್ ಕೆ.ನಾರಾಯಣ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...