ಬೆಂಬಲ ಬೆಲೆ ವ್ಯಾಪ್ತಿಗೆ ತಂಬಾಕು, ತೆಂಗು, ರಾಗಿ, ಹತ್ತಿ, ಅಡಿಕೆ : ಕೃಷ್ಣ ಆಗ್ರಹ
ಬೆಂಗಳೂರು : ಚುನಾವಣೆಯ ಬಿಸಿ, ಕನ್ನಡ ಮಾಧ್ಯಮದಲ್ಲಿ ಕಲಿಕೆ ವಿಷಯಗಳಲ್ಲೇ ಕಳೆದ ಕೆಲವು ದಿನಗಳಿಂದ ಮುಳುಗಿಹೋಗಿದ್ದ ಮುಖ್ಯಮಂತ್ರಿಗಳ ಗಮನ ಇದೀಗ ಮತ್ತೆ ರೈತನತ್ತ. ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯ ಸಂಸದರ ಜೊತೆಗಿನ ಸಭೆಯಲ್ಲಿ ರೈತರ ಕನಿಷ್ಟ ಬೆಂಬಲ ಬೆಲೆ, ವಿದ್ಯುತ್ ಸಮಸ್ಯೆ ಪರಿಹಾರ ವಿಚಾರಗಳು ಕೇಳಿಬಂದವು.
ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗೆ ಸ್ಪಂದಿಸಲು ತಂಬಾಕು, ರಾಗಿ, ಹತ್ತಿ, ತೆಂಗು ಹಾಗೂ ಅಡಿಕೆ ಬೆಳೆಗಳನ್ನೂ ಕನಿಷ್ಠ ಬೆಂಬಲ ಬೆಲೆ ಕೊಟ್ಟು ಖರೀದಿಸುವಂತೆ ಕೇಂದ್ರ ಸರ್ಕಾರದ ಮನವೊಲಿಸಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ಕೊಟ್ಟು ರಾಜ್ಯ ಸರ್ಕಾರ ಖರೀದಿಸುತ್ತಿದೆ. ಇದಕ್ಕೆ ಕೇಂದ್ರದಿಂದ ಬರಬೇಕಿರುವ ನೆರವು ಶೀಘ್ರವಾಗಿ ತಲುಪುವಂತೆ ಒತ್ತಡ ತರಬೇಕು. ಬಜೆಟ್ಟಿನಲ್ಲಿ ರಾಜ್ಯ ವಿದ್ಯುತ್ ಕ್ಷೇತ್ರಕ್ಕೆ ಮೀಸಲಿರುವ ಸಹಾಯ ಧನವನ್ನು 1700 ಕೋಟಿ ರುಪಾಯಿಯಿಂದ 2300 ಕೋಟಿ ರುಪಾಯಿಗೆ ಹೆಚ್ಚಿಸಲು ಆಗ್ರಹ ಮಾಡಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿ ಕೃಷ್ಣ ಸಂಸದರಿಗೆ ಹೇಳಿದರು.
ರಾಜ್ಯದ 200 ಕೊಳಗೇರಿಗಳ ಅಭಿವೃದ್ಧಿಗೆ 753 ಕೋಟಿ ರುಪಾಯಿ ಹಾಗೂ ಬೆಂಗಳೂರಲ್ಲಿ ಸಮರ್ಪಕ ನೀರು ಪೂರೈಕೆಗೆ 2300 ಕೋಟಿ ರುಪಾಯಿ ವೆಚ್ಚದ ಯೋಜನೆಗಳ ಪ್ರಸ್ತಾವನೆ ಕೇಂದ್ರದ ಮುಂದಿದೆ. ಅವಕ್ಕೆ ಬೇಗ ಮಂಜೂರಾತಿ ನೀಡುವಂತೆ ಸಂಸದರು ಕೇಳಬೇಕು. ಜಾರಿಗೆ ತರಬೇಕೆಂದು ರೂಪಿಸಲಾಗಿರುವ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದಷ್ಟು ಬೇಗ ಹಸಿರು ನಿಶಾನೆ ತೋರಿಸುವಂತೆ ಮಾಡಬೇಕು ಎಂದರು.
ವಿಶ್ವಸಂಸ್ಥೆ ಅಧಿಕಾರಿ ಜೊತೆ ಚರ್ಚೆ : ಇದಕ್ಕೂ ಮುನ್ನ ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ವಿಶ್ವಬ್ಯಾಂಕ್ನ ಮಾನವ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಜೋಸೆಫ್ ರಿಗ್ಜನ್ ಜೊತೆಯಲ್ಲಿ ಮುಖ್ಯಮಂತ್ರಿ ಕೃಷ್ಣ ಚರ್ಚಿಸಿದರು. ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಕೂಡ ಸಭೆಯಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ