ಮಂಗನಕಾಯಿಲೆಗೆ ಮತ್ತಿಬ್ಬರ ಬಲಿ : ಹೊನ್ನಾವರ ತಾ.ನಲ್ಲಿ ಆತಂಕ
ಹೊನ್ನಾವರ : ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಭೀತಿಯ ವಾತಾವರಣ ಮೂಡಿಸಿರುವ ಶಂಕಿತ ಮಂಗನಕಾಯಿಲೆ ಮತ್ತಿಬ್ಬರನ್ನು ಬಲಿ ತೆಗೆದುಕೊಂಡಿದೆ. ತಾಲೂಕಿನಲ್ಲಿ ಈವರೆಗೆ ಮಂಗನಕಾಯಿಲೆಯಿಂದ ಸತ್ತವರ ಸಂಖ್ಯೆ 6ಕ್ಕೆ ಏರಿದೆ.
ಮಾಗೋಡಿನ ಸಂತೋಷಿ ಸೈರು (35) ಮತ್ತು ಕೊಡಾಣಿಯ ಲಕ್ಷ್ಮೀ ಅಂಬಿಗ (50) ಸಾವನ್ನಪ್ಪಿದ ದುರ್ದೈವಿಗಳು. ಈ ಇಬ್ಬರು ಸ್ಥಳೀಯ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಲೂಕಿನಲ್ಲಿ ಮಂಗಳಗಳ ಸಾವಿನ ಜೊತೆಗೆ, ಮಂಗನ ಕಾಯಿಲೆಯೂ ಉಲ್ಬಣವಾಗುತ್ತಿದ್ದು, ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಡಾಣಿ, ಮಂಕಿ, ಮಾಗೋಡು ಮೊದಲಾದ ಕಡೆಗಳಲ್ಲಿ ಹಲವರಿಗೆ ಮಂಗನಕಾಯಿಲೆ ತಗುಲಿರುವ ಶಂಕೆ ಇದೆ. ಕಾಡಿಗೆ ತೆರಳುವ ದನಗಳಿಂದ ಉಣ್ಣಿಗಳು ಬರುತ್ತಿದ್ದು, ಇದರಿಂದ ಕಾಯಿಲೆ ಹಬ್ಬತ್ತಿದೆ ಎಂಬುದು ವೈದ್ಯರ ಅನಿಸಿಕೆ. ಹೀಗಾಗಿ ಕಾಯಿಲೆ ನಿಯಂತ್ರಣಕ್ಕೆ ಬರುವ ತನಕ ದನಗಳನ್ನು ಕಾಡಿಗೆ ಬಿಡದಂತೆ ವೈದ್ಯರು ಮನವಿ ಮಾಡಿದ್ದಾರೆ.
ಈ ಮಧ್ಯೆ ಮಂಗನಕಾಯಿಲೆಗೆ ತುತ್ತಾಗಿ ಹಲವರು ಇಲ್ಲಿನ ಶಾರದಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದಿದ್ದರೂ, ಅದೇ ಮಾರ್ಗವಾಗಿ ಹೋದ ರಾಜ್ಯ ಆರೋಗ್ಯ ಕಾರ್ಯಪಡೆ ಮುಖ್ಯಸ್ಥ ಸುದರ್ಶನ್ ಅವರು, ಆಸ್ಪತ್ರೆಗೆ ಭೇಟಿ ನೀಡದಿರುವ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ, ಹೊನ್ನಾವರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಡಾ. ಸುದರ್ಶನ್ ಅವರು, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ಮಂಗನಕಾಯಿಲೆ ಸೋಂಕು ಹರಡದಂತೆ ಅರಣ್ಯ ಪ್ರದೇಶದಲ್ಲಿ ಮೈಲಾಲ್ ಎಣ್ಣೆ ಪೂರೈಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎ.ಜಿ. ಶೆಟ್ಟಿ ತಿಳಿಸಿದ್ದಾರೆ.
(ಇನ್ಫೋವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...