ಕಿಬ್ಬನಹಳ್ಳಿ ಉದ್ವಿಗ್ನ, ರೈತರ ಮೇಲೆ ಲಾಠಿಪ್ರಹಾರ, 33 ಜನರ ಬಂಧನ
ಬೆಂಗಳೂರು : ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಸಮಾನವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗುರುವಾರ ನಡೆಸಿದ ಲಾಠಿ ಪ್ರಹಾರ, ಗಾಳಿಯಲ್ಲಿ ಗುಂಡು ಹಾಗೂ ಕಲ್ಲುತೂರಾಟದಲ್ಲಿ 40 ರೈತರು ಹಾಗೂ 11 ಪೊಲೀಸರು ಗಾಯಗೊಂಡಿದ್ದಾರೆ.
ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ 20ಕ್ಕೂ ಹೆಚ್ಚು ರೈತರು ಗಾಯಗೊಂಡರು. ಇದರಿಂದ ಉದ್ರಿಕ್ತರಾದ ರೈತರು ಪೊಲೀಸ್ ವ್ಯಾನ್ಗಳತ್ತ ಕಲ್ಲು ತೂರಾಟ ನಡೆಸಿದಾಗ ಪರಿಸ್ಥಿತಿ ಪ್ರಕೋಪಕ್ಕೆ ಹೋಯಿತು. ಈ ಘಟನೆಯಲ್ಲಿ ಪಿಎಸ್ಐ ಸಾಬೂಸಾಬ್, ಪೇದೆಗಳಾದ ರಂಗಸ್ವಾಮಯ್ಯ, ಚೌಡಪ್ಪ, ರಘು, ರಾಮಪ್ಪ ತೀವ್ರವಾಗಿ ಗಾಯಗೊಂಡರು. ಈ ಹಂತದಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದಾಗ ಒಟ್ಟು 40 ಮಂದಿ ರೈತರು ಗಾಯಗೊಂಡರು.
ಘಟನೆಗೆ ಸಂಬಂಧಿಸಿದಂತೆ 33 ರೈತರನ್ನು ಬಂಧಿಸಲಾಗಿದ್ದು, ಉಳಿದ 80 ಜನರಿಗಾಗಿ ಶೋಧ ಮುಂದುವರಿದಿದೆ. ಕಿಬ್ಬನಹಳ್ಳಿ ಕ್ರಾಸ್ ಮತ್ತು ಸುತ್ತಮುತ್ತಲ ಪ್ರದೇಶಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ 144ರ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ವಿದ್ಯುತ್ಗಾಗಿ ರೈತಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ರಸ್ತೆತಡೆ ನಡೆಸುತ್ತಿದ್ದರು.
ಗುರುವಾರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮೃತ್ಯುಂಜಯ, ಎಎಸ್ಪಿ ಹೇಮಂತ್ ನಿಂಬಾಳ್ಕರ್ ರಸ್ತೆ ತಡೆ ಚಳವಳಿ ಕೈಬಿಡುವಂತೆ ಮನವಿ ಮಾಡಿದರು. ಚಳವಳಿನಿರತರನ್ನು ಉದ್ದೇಶಿಸಿ ಮಾತನಾಡಲು ರೈತ ಮುಖಂಡ ಪ್ರಭುಸ್ವಾಮಿಗೆ ಅವಕಾಶವನ್ನೂ ನೀಡಿದರು.
ಆದರೆ, ಪ್ರಭುಸ್ವಾಮಿ ಮಾತನಾಡುತ್ತಿದ್ದಾಗ, ಮಧ್ಯದಲ್ಲೇ ತಡೆದ ಪೊಲೀಸ್ ಅಧಿಕಾರಿ ನಿಂಬಾಳ್ಕರ್ ಅವರು ಬಂಧನದ ಆದೇಶ ನೀಡಿದ್ದು, ಪರಿಸ್ಥಿತಿ ಹದಗೆಡಲು ಕಾರಣ ಎಂಬುದು ರೈತ ಮುಖಂಡರ ಆರೋಪಿಸಿದ್ದಾರೆ. ಈ ಗಲಭೆಯಲ್ಲಿ ಪೊಲೀಸ್ ವ್ಯಾನ್ ಹಾಗೂ 30ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಹಾನಿಗೊಳಗಾಗಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...