ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಏರಿಕೆ ಸಂಭವ
ನವದೆಹಲಿ : ಮುಂಬರುವ ಹಣಕಾಸು ವರ್ಷದಿಂದ ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಏರಿಸುವ ಸಂಭವ ಇದೆ. ಮುಂದಿನ ವಾರ ಮಂಡಿಸಲಾಗುವ ಕೇಂದ್ರ ರೈಲ್ವೆ ಬಜೆಟ್ ಕಠಿಣವಾಗಿರುತ್ತದೆ ಎಂಬ ಸುಳಿವನ್ನು ಸ್ವತಃ ರೈಲ್ವೆ ಖಾತೆ ಸಚಿವ ನಿತೀಶ್ ಕುಮಾರ್ ನೀಡಿದ್ದಾರೆ.
ಕೆಲವು ವರ್ಗದ ಜನರಿಗೆ ರೈಲು ಪ್ರಯಾಣದಲ್ಲಿ ನೀಡಲಾಗಿರುವ ರಿಯಾಯಿತಿಗಳನ್ನು ರದ್ದು ಮಾಡುವ ಬಗ್ಗೆ ಕೂಡ ರೈಲ್ವೆ ಇಲಾಖೆ ಚಿಂತಿಸುತ್ತಿದೆ. ರಾಖೇಶ್ ಮೋಹನ್ ಸಮಿತಿ ನೀಡಿರುವ ವರದಿಯಲ್ಲಿನ ಶಿಫಾರಸುಗಳ ರೀತ್ಯ ಅನಗತ್ಯ ವೆಚ್ಚ ಕಡಿತ ಗೊಳಿಸುವ ಬಗ್ಗೆ ಇಲಾಖೆ ಗಂಭೀರವಾಗಿ ಚಿಂತಿಸಿದೆ ಎಂದು ಅವರು ಹೇಳಿದ್ದಾರೆ.
ರೈಲ್ವೆಗೆ ಸಾಕಷ್ಟು ಪ್ರಮಾಣದ ಬಜೆಟ್ ಬೆಂಬಲವಿಲ್ಲದ ಕಾರಣ ಸಂಪನ್ಮೂಲ ಸಂಗ್ರಹದ ಗುರುತರ ಸವಾಲನ್ನು ಎದುರಿಸುತ್ತಿದೆ. ವಿವಿಧ ಯೋಜನೆಗಳಿಗೆ ಹಣ ಒದಗಿಸಲು 38,000 ಕೋಟಿ ರುಪಾಯಿಗಳ ಅಗತ್ಯವಿದೆ. ಆದರೆ, 2001-02ರಲ್ಲಿ ಕೇವಲ 3,540 ಕೋಟಿ ರುಪಾಯಿಗಳ ಬಜೆಟ್ ಬೆಂಬಲವಷ್ಟೇ ದೊರೆಯಿತು ಎಂದವರು ಹೇಳಿದ್ದಾರೆ.
ಬಜೆಟ್ ಬಗ್ಗೆ ಎಲ್ಲ ವಲಯಗಳಲ್ಲೂ ಬಹಳಷ್ಟು ನಿರೀಕ್ಷೆ ಇರುತ್ತದೆ. ಎಲ್ಲರನ್ನೂ ಮೆಚ್ಚಿಸುವುದು ಬಜೆಟ್ನಲ್ಲಿ ಸಾಧ್ಯವೇ ಇಲ್ಲ. ಬಜೆಟ್ ಮಂಡಣೆ ತ್ರಾಸದಾಯಕ ಕೆಲಸ ಎಂದು ಅವರು ಹೇಳಿದ್ದಾರೆ. ಪ್ರಯಾಣ ದರ ಮತ್ತು ಸರಕು ಸಾಗಣೆ ದರ ಏರಿಸುವ ಪ್ರಸ್ತಾಪ ಇದೆಯೇ ಎಂದು ಪತ್ರಕರ್ತರು ಕೇಳಿದಾಗ ಈ ಬಾರಿಯ ಬಜೆಟ್ ಕಠಿಣವಾಗಿರುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...