ಗಂಡನಿಗೆ ವಸಿ ಬುದ್ದಿ ಹೇಳಮ್ಮಾ...ಎಸ್ಸೆಂ ಕೃಷ್ಣರ ಪತ್ನಿ ಪ್ರೇಮಾಗೆ ಸಾಲು ಪತ್ರ
ಇನ್ಫೋ ಇನ್ಸೈಟ್
ಬೇಸಿಗೆ ಇನ್ನೂ ಆರಂಭವಾಗಿಲ್ಲ. ಆದರೆ ಕುಡಿಯಲು ತೊಟ್ಟು ನೀರಿಲ್ಲದೆ, ಸ್ಥಳೀಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರಿತ್ತು ರೋಸಿ ಹೋದ ರಾಯಚೂರು ನಗರ ಹೊರವಲಯದ ಹೆಂಗಸರು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಅವರಿಗೆ ಪತ್ರ ಬರೆದು ಗೋಳು ತೋಡಿಕೊಂಡಿದ್ದಾರೆ.
ಇದು ಸಂಘಟನೆಯಾಂದರ ಮನವಿ ಪತ್ರದಂತೆ ಒಂದು ಪತ್ರವಲ್ಲ . ಪ್ರತಿ ಮನೆಯ ಗೃಹಿಣಿಯೂ ತನ್ನದೇ ಶೈಲಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ತೋಡಿಕೊಂಡಿದ್ದಾಳೆ. ಈಗಾಗಲೇ 200 ಪತ್ರಗಳು ಪ್ರೇಮಾರ ಕೈ ಸೇರಿವೆ. ಅವುಗಳಲ್ಲಿ ಕೆಲವು ಪೋಸ್ಟ್ ಮೂಲಕ ಬಂದಿವೆ. ಮತ್ತೆ ಕೆಲವು ಫ್ಯಾಕ್ಸ್. ಪ್ರೇಮಾ ಅವರೇ ಖುದ್ಧಾಗಿ ಬಂದು ಸಮಸ್ಯೆಯನ್ನು ಬಗೆಹರಿಸಬೇಕು ಅಂತೇನೂ ಅವರೂ ಇಚ್ಛಿಸಿಲ್ಲ. ರಾಜಕಾರಣದಲ್ಲಿ ವ್ಯಸ್ತವಾಗಿರುವ ಗಂಡನಿಗೆ ಈ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದರೆ ಸಾಕು.
ಇದನ್ನು ದೂರು ಅಂತನ್ನಿ, ಅಥವಾ ಮನವಿ ಅಂತಾದರೂ ಕರೆಯಿರಿ. ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ನಿಮ್ಮ ಗಂಡನಿಗೆ ಸ್ವಲ್ಪ ಒತ್ತಾಯಿಸಿಯಮ್ಮಾ ಅಂತ ಪತ್ರದಲ್ಲಿ ಎಲ್ಲರೂ ಬರೆದಿದ್ದಾರೆ. ಪತ್ರ ಆಂದೋಳನವು ಒಂದು ವಾರಕ್ಕೆ ಮುಂಚೆಯೇ ಆರಂಭವಾಗಿತ್ತು.
ಎಲ್ಲರೂ ಕಿವುಡರೇ...
ಕುಡಿಯುವ ನೀರು ಒದಗಿಸುವಂತೆ ತಾವು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ, ನಗರ ಪಾಲಿಕೆ ಮುಂದೆ ಖಾಲಿ ಕೊಡಪಾನಗಳನ್ನು ಪ್ರದರ್ಶಿಸಿ ಧರಣಿ ಕುಳಿತ ಬಗ್ಗೆ, ಹಾಗೂ ಜನಪ್ರತಿನಿಧಿಗಳನ್ನು ಘೕರಾವ್ ಮಾಡಿ ಬೇಡಿಕೆ ಸಲ್ಲಿಸಿರುವ ಬಗ್ಗೆ ವಿವರಿಸಿದ್ದಾರೆ. ಎಲ್ಲ ದಿಕ್ಕುಗಳಲ್ಲಿಯೂ ಸೋತು ಬಂದ ಮಹಿಳೆಯರು ಪೆನ್ನು ಪತ್ರ ಕೈಗೆತ್ತಿಕೊಂಡಿದ್ದಾರೆ. ಪತ್ರದಲ್ಲಿ ಬರೇ ಸಮಸ್ಯೆಗಳನ್ನೇ ತೋಡಿಕೊಂಡಿಲ್ಲ. ನೀರಿನ ಸಮಸ್ಯೆಗಿರುವ ಕಾರಣಗಳು, ಅದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದು ಎಂಬ ಸಲಹೆಯನ್ನೂ ಬರೆಯಲಾಗಿದೆ. ಜನಪ್ರತಿನಿಧಿಗಳ ಉದಾಸೀನವನ್ನೂ ಟೀಕಿಸಲಾಗಿದೆ.
ಲೋಕಾಯುಕ್ತಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಈ ಸಮಸ್ಯೆಯ ಕುರಿತು ಚರ್ಚೆ ನಡೆಯಲೇ ಇಲ್ಲ. ಜಿಲ್ಲಾಧಿಕಾರಿಗಳೂ ಈ ಸಮಸ್ಯೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಎಲ್ಲವೂ ಆಯಿತು. ಕೊನೆಯದಾಗಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರಿಗೇ ಸಮಸ್ಯೆಯನ್ನು ವಿವರಿಸಿ, ಪರಿಹಾರ ನಿರೀಕ್ಷಿಸಿ ಫ್ಯಾಕ್ಸ್ ಮೂಲಕ ಮನವಿ ಕಳುಹಿಸಲಾಯಿತು. ಪ್ರತಿಯಾಗಿ ಮುಖ್ಯಮಂತ್ರಿ ಕಚೇರಿಯೂ ಮೌನ. ಮುಖ್ಯಮಂತ್ರಿಗಳ ಕಚೇರಿಗೆ ಫೋನ್ ಮಾಡಿದಾಗ ಯಾರೋ ದಬಾಯಿಸಿ ಫೋನ್ ಕುಕ್ಕಿದರು.
ನೀರಿನ ದಾರಿ ಕಾಣದವರ ಪತ್ರಗಳು
ಈಗ ಕೊನೆಯದಾಗಿ, ನೀರು ಕಾಣದೆ ನೊಂದ ಹೆಂಗಸರು ಪತ್ರ ಆಂದೋಳನವನ್ನು ಕೈಗೆತ್ತಿಕೊಂಡಿದ್ದಾರೆ. ಪ್ರೇಮಾ ಕೃಷ್ಣ ರ ಮೇಲೆ ಭರವಸೆ ಇಟ್ಟು ಈ ಪತ್ರಗಳನ್ನು ಬರೆಯುತ್ತಿದ್ದೇವೆ ಎಂದು ಮಹಿಳೆಯರು ಹೇಳುತ್ತಿದ್ದಾರೆ.
ಬೇಸಿಗೆ ಆರಂಭಕ್ಕೆ ಮುನ್ನವೇ ಕುಡಿಯಲು ನೀರಿಗಾಗಿ ಪರದಾಡುತ್ತಿರುವಾಗ, ಏಪ್ರಿಲ್ ತಿಂಗಳಿನ ಪರಿಸ್ಥಿತಿನ್ನು ಊಹಿಸಿಕೊಳ್ಳಲೂ ಇಲ್ಲಿನ ಜನ ಹೆದರುತ್ತಿದ್ದಾರೆ. ಬೋರ್ವೆಲ್ಗಳು, ಬಾವಿಗಳು, ಕೆರೆಕಟ್ಟೆಗಳೆಲ್ಲಾ ಈಗಲೇ ಒಣಗಿ ಬಿರುಕು ಬಿಟ್ಟಿವೆ. ಏಪ್ರಿಲ್ಗೆ ಮುನ್ನವಾದರೂ ಸರಕಾರಕ್ಕೆ ಕಿವಿ ಕೇಳಿಸಲಿ ಎಂಬುದು ರಾಯಚೂರಿನ ಮಹಿಳೆಯರ ಹಾರೈಕೆ. ನಮ್ಮ ಹಾರೈಕೆ ಕೂಡ.
ಮುಖಪುಟ / ಇವತ್ತು... ಈ ಹೊತ್ತು...