ಕುಮಾರ ಸ್ವಾಮಿಯನ್ನು ತಕ್ಷಣವೇ ಬಂಧಿಸಿ..’ -ಡಿ.ಕೆ.ಶಿವಕುಮಾರ್
ಬೆಂಗಳೂರು : ಕನಕಪುರ ಚುನಾವಣಾ ಪ್ರಚಾರ ಬಿರುಸಾಗುತ್ತಿದ್ದಂತೆಯೇ , ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ, ಸಂಯುಕ್ತ ಜನತಾ ದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕಲ್ಲುತೂರಾಟ ನಡೆಸಿದ ಘಟನೆಗಳು ವರದಿಯಾಗಿವೆ.
ಕಾಮಾಕ್ಷಿ ಪಾಳ್ಯದಲ್ಲಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಪ್ರಚಾರ ಸಭೆಯಲ್ಲಿ ಸಂಯುಕ್ತ ಜನತಾ ದಳದ ಅಭ್ಯರ್ಥಿ ಎಚ್. ಡಿ.ದೇವೇಗೌಡರ ವಿರುದ್ಧ ಆಕ್ಷೇಪಾರ್ಹ ಮಾತುಗಳು ಕೇಳಿ ಬಂದಾಗ, ಸಭೆಯಲ್ಲಿದ್ದ ಗೌಡರ ಬೆಂಬಲಿಗರು ವೇದಿಕೆಯತ್ತ ಕಲ್ಲು ತೂರಿದರು. ವೇದಿಕೆಯಲ್ಲಿದ್ದ ಆರ್. ಬಿ. ತಿಮ್ಮಾಪುರ ಹಾಗೂ ಯಶೋದಮ್ಮ ಅವರಿಗೆ ಗಾಯವಾಗಿವೆ.
ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ನಡೆದ ಕಲ್ಲುತೂರಾಟದ ಘಟನೆಗೆ ದೇವೇಗೌಡರ ಮಗ ಎಚ್. ಡಿ. ಕುಮಾರ ಸ್ವಾಮಿ ಹಾಗೂ ಅವರ ಬೆಂಬಲಿಗರೇ ಕಾರಣ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಕಾಮಾಕ್ಷಿ ಪಾಳ್ಯದ ಪೊಲೀಸ್ ಠಾಣೆಯಲ್ಲಿ ದೂರಿತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ, ಆರ್. ಬಿ. ತಿಮ್ಮಾಪುರ ಹಾಗೂ ಡಿ.ಕೆ.ಶಿವಕುಮಾರ್ ಪೊಲೀಸ್ ಠಾಣೆಯಲ್ಲಿ ನಡುರಾತ್ರಿಯವರೆಗೂ ಧರಣಿ ನಡೆಸಿದರು.
ಕುಮಾರ ಸ್ವಾಮಿ ಅವರು ಚುನಾವಣಾ ಪ್ರಚಾರ ಸಭೆ ಮುಗಿಸಿಕೊಂಡು ರಾತ್ರಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಗಡಿಯಲ್ಲಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿಯೂ ವರದಿಯಾಗಿದೆ. ತಕ್ಷಣವೇ ಎಸ್ಪಿಜಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ