ಟಿ.ಜೆ.ಎಸ್.ಜಾರ್ಜ್, ಶೈಲೇಶಚಂದ್ರ ಸೇರಿ 15 ಪತ್ರಕರ್ತರಿಗೆ ಪ್ರಶಸ್ತಿ
ಬೆಂಗಳೂರು : ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಸಂಪಾದಕೀಯ ಸಲಹೆಗಾರ ಟಿ.ಜೆ.ಎಸ್. ಜಾರ್ಜ್, ಪ್ರಜಾವಾಣಿ ಪತ್ರಿಕೆಯ ಸಹ ಸಂಪಾದಕ ರಾಜಾ ಶೈಲೇಶಚಂದ್ರಗುಪ್ತ, ಕನ್ನಡಪ್ರಭ ಪತ್ರಿಕೆಯ ದೆಹಲಿ ಪ್ರತಿನಿಧಿ ಡಿ. ಉಮಾಪತಿ ಸೇರಿದಂತೆ 15 ಪತ್ರಕರ್ತರನ್ನು ಕರ್ನಾಟಕ ಪತ್ರಿಕಾ ಅಕಾಡಮಿಯು 2001ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.
ಪತ್ರಿಕಾ ಅಕಾಡಮಿಯ ಅಧ್ಯಕ್ಷ ಎನ್. ಅರ್ಜುನದೇವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಪ್ರತಿವರ್ಷ 11 ಮಂದಿ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಪ್ರಶಸ್ತಿಯನ್ನು ಈಬಾರಿ 15 ಮಂದಿಗೆ ನೀಡಲಾಗಿದೆ. ಸರಕಾರ ಇದಕ್ಕಾಗಿ ಒಂದು ಲಕ್ಷ ರುಪಾಯಿ ಹೆಚ್ಚಿನ ಅನುದಾನ ನೀಡಿದೆ.
ಪ್ರಶಸ್ತಿ ಪಡೆದ ಪತ್ರಕರ್ತರು : ಟಿ.ಜೆ.ಎಸ್. ಜಾರ್ಜ್ (ನ್ಯೂ ಇಂಡಿಯನ್ ಎಕ್ಸ್ಪ್ರೆಸ್), ಡಿ. ಉಮಾಪತಿ (ಕನ್ನಡಪ್ರಭ), ರಾಜಾ ಶೈಲೇಶಚಂದ್ರ ಗುಪ್ತ (ಪ್ರಜಾವಾಣಿ), ಎಚ್.ವೈ. ಶಾರದಾಪ್ರಸಾದ್ (ದಿ. ಇಂದಿರಾಗಾಂಧೀ ಅವರ ಪತ್ರಿಕಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು), ಇ.ರಾಘವನ್ (ಎಕನಾಮಿಕ್ ಟೈಮ್ಸ್), ಎನ್.ವಿ. ಜೋಷಿ (ಸಂಯುಕ್ತ ಕರ್ನಾಟಕ), ಖಾಜಿ ಹರ್ಷದ್ ಅಲಿ (ಬೀದರ್ ಕಿ ಅವಾಜ್), ಕೆ.ಬಿ. ಗಣಪತಿ (ಮೈಸೂರು ಮಿತ್ರ).
ಶೀಲಾ ತಿವಾರಿ (ಚಿಂತನ, ಗುಲ್ಬರ್ಗಾ), ಬಸವರಾಜ ಸ್ವಾಮಿ (ಸುದ್ದಿಮೂಲ, ರಾಯಚೂರು), ಇಮ್ರಾನ್ ಖುರೇಷಿ (ಇಂಡೋ ಏಷ್ಯನ್ ನ್ಯೂಸ್ ಸಂಸ್ಥೆಯ ಬೆಂಗಳೂರು ಪ್ರತಿನಿಧಿ) ಎಸ್. ದೇವನಾಥ್ (ಉದಯವಾಣಿ), ಟಿ.ಎಲ್. ಪ್ರಭಾಕರ್ (ಹಿಂದೂ, ಛಾಯಾಗ್ರಾಹಕರು), ಕೆ.ವಿ. ಶ್ರೀನಿವಾಸ್ (ಆಕಾಶವಾಣಿ, ಮೈಸೂರು) ಹಾಗೂ ಉತ್ತರ ಕನ್ನಡ ಜಿಲ್ಲೆಯ ಎಲ್.ಎಸ್. ಶಾಸ್ತ್ರೀ.
ಇದಲ್ಲದೆ ಆಂದೋಲನ ಪತ್ರಿಕಾ ಬಳಕ ಅಕಾಡಮಿಯಲ್ಲಿ ಸ್ಥಾಪಿಸಿರುವ ಪ್ರಶಸ್ತಿಯು ಗುಲ್ಬರ್ಗಾದ ‘ಕ್ರಾಂತಿ’ ದಿನಪತ್ರಿಕೆಗೆ ಲಭಿಸಿದೆ. ಅಭಿಮಾನಿ ಪ್ರಕಾಶನ ಸ್ಥಾಪಿಸಿರುವ ಪ್ರಶಸ್ತಿ ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಅಬ್ಬೂರು ರಾಜಶೇಖರ್ರ ‘ರೈತನ ಮೇಲೆ ಮೃತ್ಯ ಪಾಶ’ ಲೇಖನಕ್ಕೆ ಲಭಿಸಿದೆ. ಮಾರ್ಚ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ವಿಷಯವನ್ನು ಅಕಾಡಮಿಯ ಕಾರ್ಯದರ್ಶಿ ಎಚ್.ಬಿ. ದಿನೇಶ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...