ಚರ್ಚ್ ಮೇಲೆ ದಾಳಿ: 9ಮಂದಿ ಬಂಧನ, ಸಚಿವ ಟಿ.ಜಾನ್ ಹಿನಕಲ್ಗೆ
ಬೆಂಗಳೂರು : ಮೈಸೂರು ನಗರದ ಹೊರ ವಲಯದಲ್ಲಿರುವ ಹಿನಕಲ್ ಗ್ರಾಮದ ಚರ್ಚ್ ಮೇಲೆ ಭಾನುವಾರ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದು , ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚರ್ಚ್ ಮೇಲಿನ ದಾಳಿಯಿಂದ ಘಾಸಿಗೊಂಡ ಕ್ರಿಶ್ಚಿಯನ್ ಸಮುದಾಯವನ್ನು ಸಮಾಧಾನಗೊಳಿಸಲು ಸಂಪುಟದಲ್ಲಿನ ಕ್ರಿಶ್ಚಿಯನ್ ಪ್ರತಿನಿಧಿ ಟಿ.ಜಾನ್ ಅವರನ್ನು ಸರ್ಕಾರ ಹಿನಕಲ್ಗೆ ಕಳುಹಿಸಿದೆ.
ದಾಳಿಯ ಹಿಂದೆಯಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಎಡೆಬಿಡದ ಪ್ರಯತ್ನ ನಡೆಸುತ್ತಿದ್ದು , ಉಳಿದ ಆರೋಪಿಗಳನ್ನೂ ಸದ್ಯದಲ್ಲಿಯೇ ಬಂಧಿಸಲಾಗುವುದು ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಚರ್ಚ್ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ ಖರ್ಗೆ, ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಲಕುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಸರ್ಕಾರ ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಪ ಸಂಖ್ಯಾಕರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದ ಖರ್ಗೆ, ಗಾಳಿ ಸುದ್ದಿಗಳಿಗೆ ಕಿವಿ ಕೊಡದಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಭಾನುವಾರ ಚರ್ಚ್ ಮೇಲೆ ದಾಳಿ ನಡೆಸಿದ ಸುಮಾರು 60 ಜನರ ಗುಂಪು, ಚರ್ಚ್ ಕಟ್ಟಡಕ್ಕೆ ಹಾನಿ ಮಾಡಿತ್ತು . ಮತಾಂತರಕ್ಕೆ ಪ್ರಚೋದಿಸುವ ಕರಪತ್ರಗಳು ಈ ಪ್ರದೇಶದಲ್ಲಿ ಹಂಚಿಕೆಯಾಗಿರುವ ಕುರಿತು ಚರ್ಚ್ನ ಪಾದ್ರಿ ಅವರೊಂದಿಗೆ ವಾದಕ್ಕಿಳಿದ ಗುಂಪು, ಪಾದ್ರಿ ಹಾಗೂ ಚರ್ಚ್ ವಿರುದ್ಧ ಘೋಷಣೆ ಕೂಗಿ, ಕಲ್ಲು ತೂರಾಟ ನಡೆಸಿತು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...