ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕಪುರ ಸ್ವಯಂವರ: ಪಾಣಿಗ್ರಹಣಕ್ಕೆ ದೇವೇಗೌಡ-ಶಿವಕುಮಾರ್‌ ಹಣಾಹಣಿ

By Super
|
Google Oneindia Kannada News

'ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಚುನಾವಣೆಯಲ್ಲಿ ಸೋತರು, ಅವರನ್ನು ಚಿಕ್ಕಮಗಳೂರಿನಿಂದ ಗೆಲ್ಲಿಸಿದಿರಿ. ನಾನೂ ಪ್ರಧಾನಿಯಾಗಿದ್ದೆ, ಸೋತಿದ್ದೇನೆ. ಈಗ ಕನಕಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಗೆಲ್ಲಿಸಿ- ದೆಹಲಿಗೆ ಕಳುಹಿಸಿ."

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕನಕಪುರ ಮತದಾರರನ್ನು ಓಲೈಸುತ್ತಿರುವುದು ಹೀಗೆ. ರಾಜ್ಯದವರಲ್ಲದ ಇಂದಿರಾ ಅವರನ್ನು ಚಿಕ್ಕಮಗಳೂರಿನಲ್ಲಿ ಗೆಲ್ಲಿಸಿದಿರಿ. ರಾಜ್ಯದವನೇ ಆದ ನನ್ನನ್ನು ದೆಹಲಿಗೆ ಕಳುಹಿಸಿ ಎಂದು ದೇವೇಗೌಡ ಮತದಾರರ ಕೇಳುತ್ತಿದ್ದಾರೆ. ಮಣ್ಣಿನ ಮಗ, ಮಾಜಿ ಪ್ರಧಾನಿ ಹಾಗೂ ಸದ್ಯಕ್ಕೆ ಯಾವುದೇ ಅಧಿಕಾರ ಪದವಿಲ್ಲದೆ ಪುರುಸೊತ್ತಾಗಿರುವುದು- ಇವು ಮೂರೂ ಗೌಡರ ಪರವಾಗಿ ಕನಕಪುರದಲ್ಲಿ ಕೆಲಸ ಮಾಡುತ್ತಿರುವ ಅಂಶಗಳು.

ದೇವೇಗೌಡರ ಪ್ರಬಲ ಸ್ಪರ್ಧಿಯಾದ ಡಿ.ಕೆ.ಶಿವಕುಮಾರ್‌ ಅವರ ವಾದವೇ ಬೇರೆ : ಈ ಮುನ್ನ ಸಾತನೂರು ವಿಧಾನಸಭಾ ಕ್ಷೇತ್ರದಿಂದ ದೇವೇಗೌಡ ಗೆದ್ದಿದ್ದರು. ಆದರೆ, ಸಾತನೂರು ಕ್ಷೇತ್ರವನ್ನು ಬಿಟ್ಟುಕೊಟ್ಟು ಹೊಳೆನರಸೀಪುರ ಉಳಿಸಿಕೊಂಡರು. ಈಗ ಹಾಸನ ಬಿಟ್ಟು ಕನಕಪುರಕ್ಕೆ ಬಂದಿದ್ದಾರೆ. ಮತ್ತೆ ಅವರು ಹಾಸನಕ್ಕೆ ಹೋಗುವವರೇ ಆದ್ದರಿಂದ ಸ್ಥಳೀಯನಾದ ನನಗೆ ಮತ ನೀಡಿ ಎನ್ನುತ್ತಾರೆ ಶಿವಕುಮಾರ್‌.

ಗೌಡರಿಗೆ ವಯಸ್ಸಾಗಿದೆ. ನಾನು ಯುವಕ. ನಿಮ್ಮ ಸೇವೆಗೆ ದಿನದ ಯಾವ ಹೊತ್ತಿನಲ್ಲೂ ಸಿದ್ಧ ಎನ್ನುವುದು ಶಿವಕುಮಾರ್‌ ಅವರ ಪ್ರಚಾರ ತಂತ್ರ. ಕಾಂಗ್ರೆಸ್ಸಿನಿಂದ ಪ್ರಧಾನಿಯಾದ ಗೌಡರು, ಆನಂತರ ಕಾಂಗ್ರೆಸ್ಸಿಗೇ ಮೋಸ ಮಾಡಿದರು ಅನ್ನುವುದು ಅವರ ಆಪಾದನೆ. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಾಧನೆಯ ಶ್ರೀರಕ್ಷೆ ತಮ್ಮನ್ನು ಕಾಯಲಿದೆ ಎನ್ನುವ ವಿಶ್ವಾಸವೂ ಶಿವಕುಮಾರ್‌ ಅವರಿಗಿದೆ.

ದೇವೇಗೌಡ- ಶಿವಕುಮಾರ್‌ ಅಬ್ಬರದ ಪ್ರಚಾರದ ನಡುವೆ ಬಿಜೆಪಿಯ ಈಶ್ವರಪ್ಪ ಮಂಕಾಗಿದ್ದಾರೆ. ಆದರೂ ಗೆಲುವು ನನ್ನದೇ ಎನ್ನುವುದು ಅವರ ವಿಶ್ವಾಸ. ದಳದ್ದು ಸಮಯ ಸಾಧಕ ರಾಜಕಾರಣ, ಆ ಕಾರಣದಿಂದ ದೇವೇಗೌಡ ಸೋಲುತ್ತಾರೆ. ಕೃಷ್ಣ ಸರ್ಕಾರದ ವೈಫಲ್ಯದಿಂದ ಶಿವಕುಮಾರ್‌ಗೆ ಸೋಲು. ಉಳಿದ ನನಗೇ ಗೆಲುವು ಎನ್ನುವುದು ಈಶ್ವರಪ್ಪನವರ ಲೆಕ್ಕಾಚಾರ. ಕಳೆದ ಚುನಾವಣೆಯಲ್ಲಿ 34 ಸಾವಿರ ಮತಗಳ ಅಲ್ಪ ಅಂತರದಲ್ಲಿ ಬಿಜೆಪಿ ಸೋತಿದ್ದನ್ನು ಕೂಡ ಈಶ್ವರಪ್ಪ ನೆನಪಿನಲ್ಲಿಟ್ಟಿದ್ದಾರೆ.

ಗೌಡರ ನಡುವೆ ಕಾದಾಟ, ಮಧ್ಯೆ ಕುರುಬರ ಟುರ್‌...ಬ್ಯಾ

ಕನಕಪುರ ಕ್ಷೇತ್ರದ ಹವಾ ಗಮನಿಸಿದರೆ, ದೇವೇಗೌಡ ಹಾಗೂ ಶಿವಕುಮಾರ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರೂ ಭಾರೀ ಪ್ರಚಾರ ನಡೆಸುತ್ತಿದ್ದಾರೆ. ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಪಕ್ಷ, ಜಾತಿ, ಊರು, ಪ್ರತಿಯಾಂದೂ ಮತಗಳ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿವೆ.

ದೇವೇಗೌಡರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ ಶ್ರೀನಿವಾಸ್‌ ತಲಾ ಒಂದು ಬಾರಿ ಗೆದ್ದದ್ದು ಬಿಟ್ಟರೆ ಉಳಿದಂತೆ ಕನಕಪುರ ಕಾಂಗ್ರೆಸ್‌ ಕೈ ಬಿಟ್ಟಿಲ್ಲ . ದೇಶದ ಅತಿದೊಡ್ಡ ಸಂಸತ್‌ ಕ್ಷೇತ್ರಗಳಲ್ಲಿ ಒಂದಾದ ಹಾಗೂ ಮಂಡ್ಯದಿಂದ ಬೆಂಗಳೂರಿನವರೆಗೂ ವ್ಯಾಪ್ತಿಯುಳ್ಳ ಕನಕಪುರ ಕ್ಷೇತ್ರದಲ್ಲಿ 24.98 ಲಕ್ಷ ಮತದಾರರಿದ್ದಾರೆ. ಅವರಲ್ಲಿ ಅಲ್ಪ ಸಂಖ್ಯಾತರದೇ ಮೇಲುಗೈ. ಉಳಿದಂತೆ ಒಕ್ಕಲಿಗರು, ಲಿಂಗಾಯತರು ಹಾಗೂ ವೀರಶೈವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ವೋಟುಗಳೂ ಮುಖ್ಯವಾಗಲಿವೆ ಎಂಬ ಸೊಲ್ಲು.

ಕನಕಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಕನಕಪುರ (ಪಿಜಿಆರ್‌ ಸಿಂಧ್ಯ) ಹಾಗೂ ಮಳವಳ್ಳಿ (ಸೋಮಶೇಖರ್‌) ಕ್ಷೇತ್ರಗಳು ಸಂಯುಕ್ತ ಜನತಾದಳದ ತೆಕ್ಕೆಯಲ್ಲಿದ್ದರೆ, ಉತ್ತರಹಳ್ಳಿ (ಅಶೋಕ್‌) ಹಾಗೂ ಆನೇಕಲ್‌ (ನಾರಾಯಣಸ್ವಾಮಿ) ಬಿಜೆಪಿ ಲೆಕ್ಕದಲ್ಲಿವೆ. ಉಳಿದ ನಾಲ್ಕು ಕ್ಷೇತ್ರಗಳಾದ ಸಾತನೂರು (ಡಿ.ಕೆ.ಶಿವಕುಮಾರ್‌), ಚನ್ನಪಟ್ಟಣ (ಯೋಗೇಶ್ವರ್‌), ಮಾಗಡಿ (ರೇವಣ್ಣ) ಹಾಗೂ ರಾಮನಗರ (ಸಿ.ಎಂ.ಲಿಂಗಪ್ಪ) ಕಾಂಗ್ರೆಸ್‌ ಕೈನಲ್ಲಿವೆ. ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ , ಕನಕಪುರ ಕ್ಷೇತ್ರದ ಒಟ್ಟು ಮತದಾರರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮತದಾರರನ್ನು ಹೊಂದಿರುವ ಉತ್ತರಹಳ್ಳಿ ಕ್ಷೇತ್ರದ್ದು ನಿರ್ಣಾಯಕ ಪಾತ್ರ.

ಫೆ.21 ರಂದು ಚುನಾವಣೆ. ದೇವೇಗೌಡ ಹಾಗೂ ಶಿವಕುಮಾರ್‌- ಇಬ್ಬರಲ್ಲಿ ಯಾರು ಗೆದ್ದರೂ, ಅಂತರ ಮಾತ್ರ ಕಡಿಮೆಯಾಗಿರುತ್ತದೆ.

ಚುನಾವಣಾ ಸಮೀಕ್ಷೆಗಳು ಪ್ರತಿಯಾಂದು ಚುನಾವಣೆ ಸಮಯದಲ್ಲೂ ಕರಾರುವಾಕ್ಕಾಗಿ ನಡೆಯುತ್ತವೆ. ಆಂದರೆ ಸಮೀಕ್ಷೆಯ ಫಲಿತಾಂಶ ಕರಾರುವಾಕ್ಕಾಗಿ ಇರಬೇಕು ಅಂತೇನಿಲ್ಲ. ಪತ್ರಿಕೆಗಳು, ಟಿವಿ ಚಾನಲ್‌ಗಳು, ಇತ್ತಿತ್ತಲಾಗಿ ಡಾಟ್‌ಟಾಮ್‌ಗಳು ಅಲ್ಲದೆ ಮಾರ್ಗ್‌ ಮುಂತಾದ ಸಂಸ್ಥೆಗಳು ಎಕ್ಸಿಟ್‌ ಪೋಲ್‌ ನಡೆಸುತ್ತವೆ. ವಿಶೇಷವೆಂದರೆ ಈ ಸಮೀಕ್ಷೆಗಳು ಕೆಲವು ಬಾರಿ ಕ್ಲಿಕ್‌ ಆಗುತ್ತವೆ, ಹಲವು ಬಾರಿ ಕಿಕ್‌ ಆಗುತ್ತವೆ. ಈ ಅಂಶವನ್ನು ಗಮನದಲ್ಲಿಟ್ಟೇ ಮೊನ್ನೆ ಒಬ್ಬ ಹಿರಿಯ ಮತದಾರರು ಹೇಳುತ್ತಿದ್ದರು. ನೋಡ್ತಾ ಇರಿ, ನೋಡ್ತಾ ಇರಿ.. ದೇವೇಗೌಡರು ಮತ್ತು ಶಿವಕುಮಾರ ಕೋಟಿಗಟ್ಟಲೆ ದುಡ್ಡು ಸುರಿಯುತ್ತಿದ್ದಾರೆ, ಕೊನೆಗೆ ಗೆಲ್ಲುವುದು ಬಿಜೆಪಿನೇ.

ಯಾರಿಗೆ ಗೊತ್ತು ?

ಅಂತೂ ಸಮೀಕ್ಷರ ಠೇವಣಿಯನ್ನು ನಾಪತ್ತೆಯಾಗಿಸಲು ಸಜ್ಜಾಗಿದೆ-ಇವತ್ತು ಕನಕವೃಷ್ಟಿ ಮಾಡುತ್ತಿರುವ ಕನಕಪುರ !

English summary
Devegowda slugs it out in Congress bastion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X