ಬಡ ಮಕ್ಕಳಿಗೆ ವಿದ್ಯಾದಾನ ಮಾಡಿ : ಗೃಹಿಣಿಯರಿಗೆ ಸುಧಾಮೂರ್ತಿ ಕರೆ
ಬೆಂಗಳೂರು : ಎಲ್ಲ ದಾನಗಳಿಗಿಂತಲೂ ವಿದ್ಯಾದಾನವೇ ಶ್ರೇಷ್ಠವಾದದ್ದು, ಮಹಿಳೆಯರು ತಮ್ಮ ಮಧ್ಯಾಹ್ನದ ಸಮಯವನ್ನು ವ್ಯರ್ಥ ಮಾಡದೆ, ಒಂದೆರಡು ಗಂಟೆ ಕಾಲ ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದರೆ, ಅದಕ್ಕಿಂತ ಉತ್ತಮ ಸೇವೆ ಮತ್ತೊಂದಿಲ್ಲ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದ್ದಾರೆ.
ಗೋಲ್ಡನ್ ಏಜ್ ಪ್ರತಿಷ್ಠಾನ ಏರ್ಪಡಿಸಿದ್ದ ‘ವಿದ್ಯಾಮಿತ್ರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಧನವೂ ಶಾಶ್ವತವಲ್ಲ, ಸೌಂದರ್ಯವೂ ಶಾಶ್ವತವಲ್ಲ ಆದರೆ, ವಿದ್ಯೆ ಜೀವನ ಮೌಲ್ಯವನ್ನೇ ರೂಪಿಸುತ್ತದೆ. ಇದು ಯಾರೂ ಅಪಹರಿಸದ ಧನ ಎಂದರು.
ಬ್ಲೂಕ್ರಾಸ್ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ಚಿತ್ರನಟಿ ಅಮಲಾ ಮಾತನಾಡಿ, ಸಕಲ ಜೀವರಾಶಿಗಳೂ ಒಂದೇ. ನಾವು ಪ್ರಾಣಿಗಳನ್ನು ಕೂಡ ಮನುಷ್ಯತ್ವದಿಂದ ಕಾಣಬೇಕು ಎಂದರು. ಮಹಿಳೆಯರ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಶ್ರಮಿಸಿತ್ತಿರುವ ಗೋಲ್ಡನ್ ಏಜ್ ವುಮನ್ಸ್ ಮೂವ್ಮೆಂಟ್ ಸಾಧನೆಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಗೋಲ್ಡನ್ ಏಜ್ ಅಧ್ಯಕ್ಷೆ ಪ್ರೀತಾಜೀ, ಸಂಸ್ಥೆಯ ಸಮದರ್ಶಿನಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ, ನೇತ್ರ ತಜ್ಞರಾದ ಎಂ.ಸಿ. ಮೋದಿ ಮೊದಲಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.
ಮುಖಪುಟ / ಇವತ್ತು... ಈ ಹೊತ್ತು...