ಅಬಕಾರಿಅಧಿಕಾರಿ ಮನೆ ಮೇಲೆ ದಾಳಿ : 4.5 ಕೋಟಿ ರು. ಅಕ್ರಮ ಆಸ್ತಿ ವಶ
ಬೆಂಗಳೂರು : ಚಿಕ್ಕಮಗಳೂರು ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತರ ಕಚೇರಿ ಮತ್ತು ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಸುಮಾರು ನಾಲ್ಕೂವರೆ ಕೋಟಿ ರುಪಾಯಿಗೂ ಮೀರಿದ ಅಕ್ರಮ (ಆದಾಯಕ್ಕೆ ಮೀರಿದ) ಆಸ್ತಿ ಪಾಸ್ತಿಯನ್ನು ಪತ್ತೆ ಮಾಡಿ ಜಫ್ತಿ ಮಾಡಿದ್ದಾರೆ.
ಲೋಕಾಯುಕ್ತದ ದಾಳಿಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಷ್ಟು ಭಾರೀ ಪ್ರಮಾಣದ ಆಸ್ತಿ ಪತ್ತೆಹಚ್ಚಲಾಗಿದೆ. ಅಬಕಾರಿ ಇಲಾಖೆಯ ಡೆಪ್ಯೂಟಿ ಕಮೀಷನರ್ ಡಿ.ಎಚ್. ಶ್ರೀನಿವಾಸ್ ಅವರ ಕಚೇರಿ ಹಾಗೂ ಚಿಕ್ಕಮಗಳೂರಿನ ನಿವಾಸ ಮತ್ತು ಬೆಂಗಳೂರಿನಲ್ಲಿರುವ ಎರಡು ಬೃಹತ್ ಬಂಗಲೆಗಳ ಮೇಲೆ ಹಾಗೂ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿರುವ ಆಯುಕ್ತರ ಸಂಬಂಧಿಕರ ಮನೆಗಳ ಮೇಲೆ ಕೂಡ ಏಕ ಕಾಲದಲ್ಲಿ ದಾಳಿ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿ ಪಾಸ್ತಿಗಳ ದಾಖಲೆಗಳು ದೊರೆತಿವೆ. ರಾಜ್ಯದ ವಿವಿಧ ಕಡೆಗಳಲ್ಲಿ ಶ್ರೀನಿವಾಸ್ ಅವರು 16ಕ್ಕೂ ಹೆಚ್ಚು ಮನೆ - ನಿವೇಶನ ಹೊಂದಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಕುದುರೆಗುಂಡಿಯಲ್ಲಿ 18 ಎಕರೆ ತೋಟ, ತೋಟದ ಮನೆ, ಸಕಲೇಶಪುರದ ಹೆಬ್ಬಸಹಳ್ಳಿಯಲ್ಲಿ 30 ಎಕರೆ ಕಾಫಿ ತೋಟವೂ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸ್ ಅವರು, 15ಕ್ಕೂ ಹೆಚ್ಚು ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದಾರೆ. ದಾಳಿಯ ಕಾಲದಲ್ಲಿ 10 ಲಕ್ಷ ರುಪಾಯಿ ನಗದು, 10 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರು. ಬೆಲೆಯ ಠೇವಣಿ ಪತ್ರ, ಶೇರುಪತ್ರ ವಶಪಡಿಸಿಕೊಳ್ಳಲಾಗಿದೆ. 1971ರಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಆಗಿ ಇಲಾಖೆ ಸೇರಿದ ಶ್ರೀನಿವಾಸ್ ಇದೇ 28ರಂದು ನಿವೃತ್ತರಾಗಲಿದ್ದಾರೆ.
ಈ ದಾಳಿಯ ನೇತೃತ್ವವನ್ನು ಲೋಕಾಯುಕ್ತ ಎಸ್ಪಿ ಜಿ. ರಮೇಶ್, ಡಿವೈಎಸ್ಪಿ ನಾರಾಯಣಪ್ಪ, ಅಧಿಕಾರಿಗಳಾದ ಎ.ಬಿ. ಜೋಯಪ್ಪ, ಪಶುಪತಿ ಮಠ್, ಚಂದ್ರನಾಯಕ್ ಜಾಗೃತ ದಳದ ಅಧಿಕಾರಿ ರಿಯಾದ್ ಅಹಮದ್ ಮೊದಲಾದವರು ವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...