ಕೆಟ್ಟ ಸಂಸ್ಕೃತಿಯನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ : ವೀರೇಂದ್ರ ಹೆಗ್ಗಡೆ
ಬೆಂಗಳೂರು : ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಸ್ಪರ್ಧಾ ಮನೋಧರ್ಮಕ್ಕನುಗುಣವಾಗಿ ಶಿಕ್ಷಣದ ಮೌಲ್ಯವನ್ನು ಎತ್ತಿ ಹಿಡಿಯುವುದೇ ಇಂದು ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಹೇಳಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ಪೇರೆಂಟ್ಸ್ ಅಸೋಸಿಯೇಷನ್ ನಿರ್ಮಿಸಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮನದಲ್ಲಿ ಮುಸುಕಿರುವ ಕತ್ತಲನ್ನೂ ದೂರಮಾಡಿ ಜ್ಞಾನದ ಬೆಳಕನ್ನು ಹಚ್ಚುವ ವಿದ್ಯೆ ಅತ್ಯಂತ ಪವಿತ್ರವಾದ್ದು. ಅಂತಹ ವಿದ್ಯೆ ಗಳಿಸಲು ಪೂರ್ವಾರ್ಜಿತ ಪುಣ್ಯ ಮಾಡಿರಬೇಕು ಎಂದರು.
ಆದರೆ, ಇಂದು ಶಿಕ್ಷಣ - ವಿದ್ಯೆ ಪರಸ್ಪರ ಪೈಪೋಟಿ ಮತ್ತು ವ್ಯವಹಾರದ ಜೊತೆ ಸೆಣಸಾಡುವ ಹಂತ ತಲುಪಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ತಲೆಮಾರಿನ ಮಕ್ಕಳಲ್ಲಿ ಓದುವ ಪ್ರವೃತ್ತಿಯೇ ಇಲ್ಲವಾಗಿದೆ. ಕತೆ, ಕಾದಂಬರಿ, ವಿಚಾರ ಸಾಹಿತ್ಯಗಳ ಬಗ್ಗೆ ಅವರಿಗೆ ಅರಿವೇ ಇಲ್ಲ. ಇತಿಹಾಸದ ಬಗ್ಗೆಯಂತೂ ಪರಿಜ್ಞಾನವೇ ಇಲ್ಲ ಎಂದರು.
ಈಗಿನ ಜನತೆಗೆ ಕ್ಷಣಿಕ ಸುಖ ಬೇಕೇ ಹೊರತು, ದೀರ್ಘಕಾಲೀನ ಸೌಖ್ಯದ ಚಿಂತೆಯಿಲ್ಲ. ನಾವಿಂದು ಕೆಟ್ಟ ಸಂಸ್ಕೃತಿಯನ್ನು ಟಿವಿಗಳ ಮೂಲಕ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿದ್ದ ಗುರುಹಿರಿಯರನ್ನು ಗೌರವಿಸುವ ಪೂಜಿಸುವ ಮನೋವೃತ್ತಿ ಇಂದು ವಿದೇಶಗಳಿಗೆ ರಫ್ತಾಗಿಹೋಗಿದೆ ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಪತಿ ಡಾ.ಕೆ. ಸಿದ್ಧಪ್ಪ, ಪ್ರೊ. ಸರೋಜಿನಿ ಸಿಂತ್ರಿ ಮೊದಲಾದವರು ಪಾಲ್ಗೊಂಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...