ಸುತ್ತೂರಿನಲ್ಲಿ 58 ಜೋಡಿಗಳ ಸರಳ ಸಾಮೂಹಿಕ ವಿವಾಹ ಮಹೋತ್ಸವ
ನಂಜನಗೂಡು : ತಾಲೂಕಿನ ಸುತ್ತೂರಿನಲ್ಲಿ ಶ್ರೀ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 58 ಜೋಡಿಗಳು ಸತಿ ಪತಿಯರಾದರು.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ವಧೂವರರ ಕಲ್ಯಾಣವು ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನೆರವೇರಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಜರಿದ್ದರು.
ಈ ಸರಳ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲ ನವ ವಧೂವರರಿಗೂ ಮಠದ ವತಿಯಿಂದ ಸೀರೆ, ಕುಪ್ಪಸ, ಪಂಚೆ ಹಾಗೂ ಚಿನ್ನದ ತಾಳಿಯನ್ನು ಉಚಿತವಾಗಿ ನೀಡಲಾಯಿತು. ಶ್ರೀಶಿವರಾತ್ರೀ ದೇಶಿಕೇಂದ್ರ ಸ್ವಾಮಿಗಳು ಮದುವೆಯ ಮಹತ್ವವನ್ನು ವಿವರಿಸಿ, ಆಶೀರ್ವಚನ ನೀಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹಾಗೂ ಮಾಜಿ ಸಚಿವ ಬಿ. ಸೋಮಶೇಖರ್ ವಹಿಸಿದ್ದರು. ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಎಂ.ವಿ. ವೆಂಕಟಪ್ಪ ಪಾಲ್ಗೊಂಡಿದ್ದರು.
ಜಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಸುಗಳ (ಎತ್ತುಗಳು) ಪೈಕಿ ಅತ್ಯುತ್ತಮವಾದ ರಾಸಿಗೆ ಬಹುಮಾನ ನೀಡಲಾಯಿತು. ಕೇಂದ್ರ ಸಚಿವರಾದ ವಿ. ಶ್ರೀನಿವಾಸ ಪ್ರಸಾದ್ ಅವರು ಈ ಬಹುಮಾನಗಳನ್ನು ವಿತರಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಂಸತ್ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್, ತಮಿಳುನಾಡು ಹಾಗೂ ಕೇರಳದ ಹಲವು ಶಾಸಕರು, ಸಚಿವರು ಭಾಗವಹಿಸಿದ್ದರು.
(ಇನ್ಫೋವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...