‘ಯೋಜನಾ ಗಾತ್ರದ ಕಡಿತದಿಂದ ನೀರಾವರಿ ಯೋಜನೆಗೆ ಧಕ್ಕೆ ಇಲ್ಲ’
ಬೆಂಗಳೂರು : ಕೃಷ್ಣ ಕೊಳ್ಳದಲ್ಲಿ ಕೈಗೆತ್ತಿಕೊಳ್ಳಲಾಗಿರುವ 11 ನೀರಾವರಿ ಯೋಜನೆಗಳನ್ನು ಶೀಘ್ರವೇ ರಾಜ್ಯಕ್ಕೆ ಸಮರ್ಪಿಸಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ಬುಧವಾರ ಹೇಳಿದರು. ಹಲವು ವರ್ಷಗಳಿಂದ ಸೊರಗುತ್ತಿದ್ದ ಈ ಯೋಜನೆಗಳು ಈಗ ಮುಕ್ತಾಯದ ಹಂತದಲ್ಲಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರವು ಈಗಾಗಲೇ ಮೂರು ಮಹತ್ವದ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರಲ್ಲಿ ಹಳ್ಳಿ ಮೈಸೂರಿನ ಏತ ನೀರಾವರಿ ಯೋಜನೆ, ಹಿರೇಹಳ್ಳ ಯೋಜನೆ ಹಾಗೂ 133 ಕಿ.ಮೀಟರ್ವರೆಗಿನ ಇಂಡಿ ಶಾಖಾ ನಾಲಾ ಯೋಜನೆ ಸೇರಿದೆ ಎಂದರು.
ಆಂಧ್ರ ಪ್ರದೇಶವು ರಾಜ್ಯದ ನೀರನ್ನು ಕಸಿಯಲು ಕೈಗೊಂಡ ಅಕ್ರಮ ನೀರಾವರಿ ಕಾಮಗಾರಿಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಮಾಲೋಚನೆ ಕರಡು ಸಿದ್ಧಪಡಿಸಲಾಗಿದ್ದು, ಅದಕ್ಕೆ ಅಂತಿಮ ರೂಪ ಕೊಡಬೇಕಾಗಿದೆ ಎಂದೂ ಅವರು ಹೇಳಿದರು.
ರಾಜ್ಯದ ವಾರ್ಷಿಕ ಯೋಜನಾ ಗಾತ್ರದಲ್ಲಿ 248 ಕೋಟಿ ರುಪಾಯಿಗಳ ಕಡಿತವಾಗಿದ್ದರೂ ಕೂಡ ರಾಜ್ಯದ ಬೃಹತ್ ನೀರಾವರಿ ಯೋಜನೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪಾಟೀಲ್ ಸ್ಪಷ್ಟಪಡಿಸಿದರು. ಕೇಂದ್ರದ ಎಐಬಿಪಿ ಯೋಜನೆಯಡಿಯಲ್ಲಿ ಹೆಚ್ಚಿನ ನೆರವಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...