ಕೆಪಿಟಿಸಿಎಲ್ ಮುಂದೆ ಧರಣಿ ನಿರತ ರೈತ ಹೃದಯಾಘಾತದಿಂದ ನಿಧನ
ಬೆಂಗಳೂರು : ಕಳೆದ 20 ದಿನಗಳಿಂದ ನಗರದ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (ಕೆಪಿಟಿಸಿಎಲ್) ದ ಮುಂದೆ ಕೃಷಿ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಬೇಡಿಕೆಯನ್ನಿಟ್ಟು ಧರಣಿ ನಡೆಸುತ್ತಿರುವ ರೈತರ ಪೈಕಿ ಸಿದ್ಧಲಿಂಗಯ್ಯ (40) ಎಂಬುವರು ಮಂಗಳವಾರ ತೀವ್ರ ಹೃದಯಾಘಾತದಿಂದ ನಿಧನರಾದರು.
ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ತುಂಬಾಪುರದ ಸಿದ್ಧಲಿಂಗಯ್ಯ ಕರ್ನಾಟಕ ರಾಜ್ಯ ರೈತ ಸಂಘದ ಸಕ್ರಿಯ ಚಳವಳಿಕಾರರಾಗಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಿದ್ಧಲಿಂಗಯ್ಯ ಅಗಲಿದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಎದೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟು ಹೊತ್ತಿಗೆ ಸಿದ್ಧಲಿಂಗಯ್ಯ ಮೃತ ಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತರ ಪಾರ್ಥಿವ ಶರೀರವನ್ನು ತುಂಬಾಪುರಕ್ಕೆ ಒಯ್ಯಲಾಯಿತು.
ಘಟನೆಗೆ ಪ್ರತಿಕ್ರಿಯಿಸಿದ ರೈತ ಸಂಘದ ಅಧ್ಯಕ್ಷ ಎಂ.ಡಿ.ನಂಜುಂಡ ಸ್ವಾಮಿ, ಇದು ಚಳವಳಿ ನಿರತ 149ನೇ ರೈತನ ಸಾವು. ರೈತರ ಮೊರೆಗೆ ಮುಖ್ಯಮಂತ್ರಿಗಳು ಇನ್ನೂ ಕಿವಿಗೊಟ್ಟಿಲ್ಲ. ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಸುಮ್ಮನಿರುವ ಸರ್ಕಾರವನ್ನು ಬಡಿದೆಬ್ಬಿಸಲು ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...