ಮತದಾರರಿಗೆ ಮಾಜಿ ಪ್ರಧಾನಿ ದೇವೇಗೌಡರೂ ಪತ್ರ ಬರೆದಿದ್ದಾರೆ
ಬೆಂಗಳೂರು : ಕನಕಪುರ ಉಪ ಚುನಾವಣೆಯ ಪ್ರಚಾರ ತಂತ್ರವಾಗಿ ಉತ್ತರ ಹಳ್ಳಿ ಕ್ಷೇತ್ರದ ಮನೆ ಮನೆಗೂ ಪತ್ರ ಹಾಕುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ತಂತ್ರಕ್ಕಿಂತ ದೇವೇಗೌಡರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಉತ್ತರ ಹಳ್ಳಿ ಜೊತೆಗೆ ಆನೇಕಲ್ ಕ್ಷೇತ್ರದ ಮತದಾರರಿಗೂ ಗೌಡರ ಪತ್ರ ರವಾನೆಯಾಗಲಿದೆ. ಅಂದಹಾಗೆ, ಪತ್ರ ಹಂಚುವವರು ಗೌಡರ ಕಡೆಯವರೇ.
ಕಾರ್ಪೊರೇಟ್ ಶೈಲಿಯ ಚಿಕ್ಕದೊಂದು ಪತ್ರವನ್ನು ಮುಖ್ಯಮಂತ್ರಿಗಳು ಬರೆದರೆ, ಗೌಡರು ಮನವಿಯ ಜೊತೆಗೆ ಮತದಾರರಿಗೆ ಮಾರ್ಗದರ್ಶಿಯನ್ನೂ ಕೊಡುತ್ತಿದ್ದಾರೆ. ಉತ್ತರಹಳ್ಳಿ (12.39 ಲಕ್ಷ ಮತದಾರರು) ಹೊರತು ಪಡಿಸಿದರೆ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಆನೇಕಲ್(2.76 ಲಕ್ಷ ಮತದಾರರು) ಹೆಚ್ಚು ಮತದಾರರನ್ನುಳ್ಳ ಕ್ಷೇತ್ರ. ಈ ಕಾರಣಕ್ಕೇ ಗೌಡರು ಇಲ್ಲಿ ವೋಟ್ ಬ್ಯಾಂಕ್ ವೃದ್ಧಿಸಿಕೊಳ್ಳಲು ನಿರ್ಧರಿಸಿದ್ದಾರೆ. ಎಷ್ಟು ಕಾರು, ಕಾಲು ಸವೆಸಿದರೂ ಎಲ್ಲೆಡೆಗೂ ಖುದ್ದು ಹೋಗಿ ಮತ ಕೇಳುವುದು ಗೌಡರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪತ್ರ ಮುಖೇನ ಮತಯಾಚನೆ ಈಗ ಉಳಿದಿರುವ ಮಾರ್ಗ.
ಕಳೆದ ಎರಡು ದಿನಗಳಿಂದ ಪತ್ರ ಹಾಗೂ ಮತದಾರರಿಗೆ ಮಾಹಿತಿ ಸಿದ್ಧಪಡಿಸುವ ಕಾರ್ಯವನ್ನು ಜನತಾ ದಳದ ಕಾರ್ಯಕರ್ತರು ಚುರುಕಾಗಿಸಿದ್ದಾರೆ. ಗೌಡರ ಮನವಿಯ ಜೊತೆಗೆ ಇಲೆಕ್ಟ್ರಾನಿಕ್ ಮತ ಚಲಾವಣಾ ಯಂತ್ರವನ್ನು ಬಳಸುವುದು ಹೇಗೆ ಎಂಬ ವಿವರವೂ ಪತ್ರದಲ್ಲಿರುತ್ತದೆ. ಯಂತ್ರದಲ್ಲಿ 2ನೇ ನಂಬರನ್ನೇ ಒತ್ತಿ ಎಂದು ಪತ್ರದಲ್ಲಿ ಬರೆಸುವುದನ್ನು ಗೌಡರು ಮರೆತಿಲ್ಲ (ಯಂತ್ರದಲ್ಲಿ ಗೌಡರ ನಂಬರು 2).
(ಇನ್ಫೋ ವಾರ್ತೆ)
ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ