ನಟಿ ಉಮಾಶ್ರೀ, ಸಚಿವೆಯರಿದ್ದ ಕಾರಿನ ಮೇಲೆ ದಳ ಕಾರ್ಯಕರ್ತರ ದಾಳಿ
ಬೆಂಗಳೂರು : ಕನಕಪುರ ಲೋಕಸಭೆ ಉಪ ಚುನಾವಣೆಯ ಮತದಾನದ ದಿನ ಹತ್ತಿರವಾಗುತ್ತಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ಪುಂಡಾಂಟಿಕೆ, ಮಾರಾಮಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಭಾರತೀಯ ಜನತಾಪಕ್ಷ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಜಾತ್ಯತೀತ ಜನತಾದಳ ಕಾರ್ಯಕರ್ತರು ತಮ್ಮ ಪಕ್ಷದ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋಮವಾರ ರಾತ್ರಿ ಸಾತನೂರು ಬಳಿಯ ಶ್ರೀರಂಗಪುರದಲ್ಲಿ ಚುನಾವಣೆ ಪ್ರಚಾರ ಮುಗಿಸಿಕೊಂಡು ಹಿಂತಿರುಗುತ್ತಿದ್ದ ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಸಚಿವರಾದ ಮೋಟಮ್ಮ, ಸುಮಾವಸಂತ್ ಹಾಗೂ ರಾಜ್ಯಸಭೆ ಸದಸ್ಯೆ ಬಿಂಬಾರಾಯ್ಕರ್ ಅವರಿದ್ದ ಕಾರಿನ ಮೇಲೆ ಜಾತ್ಯತೀತ ಜನತಾದಳ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ.
ತಾವು ಪ್ರಚಾರಕಾರ್ಯ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ, ತಮ್ಮ ಕಾರಿನ್ನು ತಡೆದು ಜನತಾದಳ (ಎಸ್) ಕಾರ್ಯಕರ್ತರು ದಾಳಿ ಮಾಡಿದರು, ತಮ್ಮ ಕಾರಿನ ಎಲ್ಲ ಕಿಟಕಿ ಗಾಜುಗಳು ಪುಡಿಯಾಗಿದ್ದು, ಕಾರಿಗೂ ಜಖಂ ಆಗಿದೆ ಎಂದು ಬಿಂಬಾ ರಾಯ್ಕರ್ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.
ತಮ್ಮ ಪರ ಪ್ರಚಾರ ಕೈಗೊಂಡಿರುವ ಕಾರ್ಯಕರ್ತರ ಮೇಲೆ 70ಕ್ಕೂ ಹೆಚ್ಚು ಜಾತ್ಯತೀತ ದಳ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ ಉಮಾಶ್ರೀ, ರಾಯ್ಕರ್, ಸುಮಾವಸಂತ್ ಹಾಗೂ ಮೋಟಮ್ಮ ಅವರಿದ್ದ ಕಾರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೇ ಮಾಡಿದ್ದಾರೆಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರು ಬಂದು ಅವರನ್ನು ಕಾಪಾಡಿದ್ದಾರೆ ಎಂದೂ ಶಿವಕುಮಾರ್ ತಿಳಿಸಿದ್ದಾರೆ.
ಆದರೆ ಈ ಕಲ್ಲು ತೂರಾಟದಲ್ಲಿ ಸಚಿವರು ಮತ್ತು ರಾಜ್ಯಸಭಾ ಸದಸ್ಯರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಚಿವರ ಕಾರಿನ ಮೇಲೆ ನಡೆದಿರುವ ಹಲ್ಲೆಯನ್ನು ಸಚಿವ ಆರ್.ವಿ. ದೇಶಪಾಂಡೆ ಹಾಗೂ ಕಾಂಗ್ರೆಸ್ ಅಧಿಕೃತ ವಕ್ತಾರರಾದ ಉಗ್ರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಗುಂಪುಘರ್ಷಣೆಗೆ ತಮ್ಮ ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಚಿವರುಗಳಿದ್ದ ಕಾರಿನ ಮೇಲೆ ಹಲ್ಲೆ ನಡೆದಿರುವುದನ್ನು ಅಕ್ಕೂರು ಪೊಲೀಸರು ಖಚಿತಪಡಿಸಿದ್ದಾರೆ. ಈ ಬಗ್ಗೆ ದೂರೊಂದು ದಾಖಲಾಗಿದೆ.
ಬಿಜೆಪಿ ಆರೋಪ : ಚನ್ನಪಟ್ಟಣದಲ್ಲಿ ಬಿಜೆಪಿ ಕಚೇರಿಗೆ ನುಗ್ಗಿ, ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಜನತಾದಳ ಎಸ್ ಕಾರ್ಯಕರ್ತರು ಹಲ್ಲೆ ನಡೆಸಿ, ಪ್ರಾಣಬೆದರಿಕೆ ಹಾಕುತ್ತಿದ್ದಾರೆ ಎಂದು ಭಾರತೀಯ ಜನತಾಪಕ್ಷದ ನಾಯಕರಾದ ಸುರೇಶ್ ಕುಮಾರ್ ಮತ್ತು ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
50 -60 ಮಂದಿ ದಳ ಎಸ್ ಕಾರ್ಯಕರ್ತರು ಚನ್ನಪಟ್ಟಣದ ಪಕ್ಷದ ಕಚೇರಿಗೆ ನುಗ್ಗಿ ಬಂಟಿಂಗ್ಸ್ ಕಿತ್ತೆಸೆದು, ರಾಮಚಂದ್ರ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಪದಾಧಿಕಾರಿಗಳನ್ನೂ ಥಳಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ನಿರಾಕರಿಸಿದರು, ಆನಂತರ ಡಿಐಪಿ ಎಸ್ಪಿ ಜೊತೆ ಮಾತನಾಡಿ ದೂರು ದಾಖಲಿಸಲಾಯಿತು ಎಂದೂ ಅವರು ಹೇಳಿದರು.
(ಪಿಟಿಐ/ಇನ್ಫೋ ವಾರ್ತೆ)
ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ