11 ಜಿಲ್ಲೆಗಳಿಗೆ ನೀರೊದಗಿಸುವ ‘ಜಲ ನಿರ್ಮಲ’ ಯೋಜನೆಗೆ ಚಾಲನೆ
ಬೆಂಗಳೂರು : ಕರ್ನಾಟಕದ 11 ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ 1,035 ಕೋಟಿ ರುಪಾಯಿಗಳ ವಿಶ್ವಬ್ಯಾಂಕ್ ನೆರವಿನ ಯೋಜನೆಯನ್ನು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೋಮವಾರ ಚಾಲನೆ ನೀಡಿದರು.
‘ಜಲ ನಿರ್ಮಲ’ ಎಂದು ಕರೆಯಲಾಗುವ ಈ ಎರಡನೇ ಯೋಜನೆಯು ಉತ್ತರ ಕನ್ನಡ ಜಿಲ್ಲೆಯ 400 ಸಿದ್ದಿ ಮತ್ತು ಲಂಬಾಣಿ ತಾಂಡಾಗಳೂ ಸೇರಿದಂತೆ, ರಾಜ್ಯದ 700 ಗ್ರಾಮಪಂಚಾಯಿತಿ ಹಾಗೂ 2100 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲಿದೆ.
ಉತ್ತರ ಕನ್ನಡ, ಬೆಳಗಾವಿ, ಬೀದರ್, ಬಾಗಲಕೋಟೆ, ಬಿಜಾಪುರ, ಧಾರವಾಡ, ಗದಗ್, ಗುಲ್ಬರ್ಗಾ, ಹಾವೇರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನವಾಗಲಿದ್ದು, ಇದರಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಇರುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದ ಎಲ್ಲ ಜನರಿಗೂ ಶುದ್ಧವಾದ ಕುಡಿಯುವ ನೀರು ದೊರಕಬೇಕು ಎಂಬುದು ಸರಕಾರದ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಜಲ ನಿರ್ಮಲ ಯೋಜನೆಯು ಗ್ರಾಮೀಣಾಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲಾಗಿದೆ ಎಂದು ಅವರು ಹೇಳಿದರು. ಯೋಜನೆಯು 2002ರಿಂದ 2007ರ ಅವಧಿಯಲ್ಲಿ ಅನುಷ್ಠಾನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಂ.ವೈ. ಘೋರ್ಪಡೆ, ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಎಂ. ದಿವಾಕರ ಬಾಬು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು, ವಿಶ್ವಬ್ಯಾಂಕ್ನ ದಕ್ಷಿಣ ಏಷ್ಯಾ ಪ್ರಾಂತದ ಗ್ರಾಮೀಣಾಭಿವೃದ್ಧಿ ವಲಯದ ವ್ಯವಸ್ಥಾಪಕ ಗಜಾನಂದ ಹಾಗೂ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
(ಪಿಟಿಐ / ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...