ಇಂಗ್ಲೀಷ್ ಮಾಧ್ಯಮದಿಂದ ದಟ್ಟ ದರಿದ್ರರಾಗುತ್ತಿದ್ದೇವೆ -ಎಸ್.ಎಲ್.ಭೈರಪ್ಪ
ದಾವಣಗೆರೆ: ರಾಜ್ಯದಲ್ಲಿ 300 ಹೊಸ ಇಂಗ್ಲೀಷ್ ಶಾಲೆಗಳಿಗೆ ಅನುಮತಿ ನೀಡಿರುವ ಸರ್ಕಾರದ ಕ್ರಮವನ್ನು ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್.ಭೈರಪ್ಪ ತೀವ್ರವಾಗಿ ಟೀಕಿಸಿದ್ದಾರೆ.
ಇಂಗ್ಲೀಷ್ ಮಾಧ್ಯಮ ಪರಿಚಯವಾದ ನಂತರಕ ವಿದ್ಯಾರ್ಥಿಗಳು ಕನ್ನಡವನ್ನು ಮರೆಯುತ್ತಿದ್ದಾರೆ. ಇಂಗ್ಲೀಷ್ ಪ್ರಭಾವದಿಂದಾಗಿ ನಾವು ಸಾಂಸ್ಕೃತಿಕವಾಗಿ ದಟ್ಟ ದರಿದ್ರರಾಗುತ್ತಿದ್ದೇವೆ. ಕನ್ನಡ ಸಾಹಿತ್ಯದ ಪ್ರಕಾರಗಳು ಮೂಲೆ ಗುಂಪಾಗುತ್ತಿವೆ ಎಂದು ಭೈರಪ್ಪ ವಿಷಾದಿಸಿದರು. ಅವರು ಗುಲ್ಬರ್ಗಾದ ಕಲಾವಿದ ಜೆ.ಎಸ್. ಖಂಡೇರಾವ್ ಅವರಿಗೆ ಶಂಕರ್ ಪಾಟೀಲ್ ಸ್ಮಾರಕ ಪ್ರಥಮ ಕಲಾ ಪ್ರಶಸ್ತಿಯನ್ನು ವಿತರಿಸಿ ಮಾತನಾಡುತ್ತಿದ್ದರು.
ಶಿಕ್ಷಣದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರಗಳಂಥ ಪ್ರಕಾರಗಳಿಗೆ ಮನ್ನಣೆ ದೊರೆಯುತ್ತಿದೆಯೇ ಹೊರತು, ಚಿತ್ರಕಲೆ ಹಾಗೂ ಸಂಗೀತಗಳಂತ ಲಲಿತ ಕಲಾ ಪ್ರಕಾರಗಳು ಅವಜ್ಞೆಗೆ ತುತ್ತಾಗಿವೆ. ಇಂಥ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಹೊಸ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಿರುವುದು ವಿಪರ್ಯಾಸ ಎಂದು ಭೈರಪ್ಪ ಬಣ್ಣಿಸಿದರು.
ಬದುಕಿನಲ್ಲಿ ಕಲೆಯ ಸಂಸ್ಕಾರ ಅತ್ಯಗತ್ಯ. ಈ ಸಂಸ್ಕಾರದಿಂದಾಗಿ ಬದುಕು ಸುಂದರವಾಗುತ್ತದೆ. ಆ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಕಲಾತ್ಮಕತೆ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಭೈರಪ್ಪ ಹೇಳಿದರು.
ಪಂಪ ಪ್ರಶಸ್ತಿ ವಿಜೇತ ಕವಿ ಚನ್ನವೀರ ಕಣವಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪೀಟರ್ ಲೂಯಿಸ್, ಕಲಾವಿದ ಹಡಪದ್, ವಿಮರ್ಶಕ ಎಂ.ಎಚ್.ಕೃಷ್ಣಯ್ಯ, ಶಂಕರ್ ಪಾಟೀಲ್ ಪ್ರತಿಷ್ಠಾನದ ಕಾರ್ಯದರ್ಶಿ ನಯನ್ ಪಾಟೀಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...